ಉಪ್ಪಳ: ಕಾರಿಗೆ ಹೆಚ್ಚುವರಿ ಸೈಲೆನ್ಸರ್ ಅಳವಡಿಸಿ ಅಪರಿಮಿತ ಶಬ್ದ ಸಹಿತ ಬೆಂಕಿ, ಹೊಗೆ ಸೃಷ್ಟಿಸುತ್ತಾ ಸಂಚರಿಸಿ ಬಳಿಕ ಆ ದೃಶ್ಯವನ್ನು ಇನ್ಸ್ಟಾಗ್ರಾಂನಲ್ಲಿ ಪ್ರಚಾರ ಮಾಡಿದ ಇಬ್ಬರ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂ ಡು ಕಾರನ್ನು ವಶಕ್ಕೆ ತೆಗೆದಿದ್ದಾರೆ. ಕಂಚಿಲ ಚಾರ್ಲ ನಿವಾಸಿ ಅಹಮ್ಮದ್ ಜಿಲಾಲ್ (19), ಬಂಬ್ರಾಣ ನಂಬೇಡಿ ಹೌಸ್ನ ಹಸೈನಾರ್ (22) ಎಂಬಿವರ ವಿರುದ್ಧ ಕೇಸು ದಾಖಲಿಸಲಾಗಿದೆ. ಈತಿಂಗಳ ೫ರಂದು ಉಪ್ಪಳ ಪೆಟ್ರೋಲ್ ಬಂಕ್ ಹಾಗೂ ಪರಿಸರದ ರಸ್ತೆಯಲ್ಲಿ ಅಪರಿಮಿತ ಶಬ್ದದೊಂದಿಗೆ ನಂಬ್ರಪ್ಲೇಟ್ ಇಲ್ಲದ ಕಾರು ಸಂಚರಿಸಿದೆ. ಅಲ್ಲದ ಕಾರಿನ ಅಡಿಭಾಗದಿಂದ ಬೆಂಕಿ ಹಾಗೂ ಹೊಗೆ ಸೃಷ್ಟಿಸುತ್ತಾ ಸಂಚರಿಸಿದ್ದು, ಈ ದೃಶ್ಯಗಳನ್ನು ಇನ್ಸ್ಟಾ ಗ್ರಾಂನಲ್ಲಿ ಪ್ರಚಾರ ಮಾಡಲಾಗಿತ್ತು. ಇದೇ ವೇಳೆ ಅಪರಿಮಿತ ಶಬ್ದದೊಂದಿಗೆ ಕಾರು ಸಂಚರಿಸುವ ಬಗ್ಗೆ ಮಾಹಿತಿ ಲಭಿಸಿದ ಪೊಲೀಸರು ಕಾರನ್ನು ಪತ್ತೆಹಚ್ಚಲು ಕಾರ್ಯಾಚರಣೆ ಆರಂಭಿಸಿದ್ದರು. ಪೊಲೀಸರು ಕಾರನ್ನು ಹಿಂಭಾಲಿಸುವ ವೀಡಿಯೋವನ್ನು ಕೂಡಾ ಆರೋಪಿಗಳು ಸಾಮಾಜಿಕ ಜಾಲ ತಾಣದಲ್ಲಿ ಪ್ರಚಾರ ಮಾಡಿರುವುದಾಗಿ ದೂರಲಾಗಿದೆ. ಈ ಹಿನ್ನೆಲೆಯಲ್ಲಿ ಸ್ವತಃ ಕೇಸು ದಾಖಲಿಸಿಕೊಂಡ ಪೊಲೀಸರು ಇಬ್ಬರನ್ನು ಠಾಣೆಗೆ ಕರೆಸಿ ಅವರಿಗೆ ನೋಟೀಸು ನೀಡಿ ಬಿಡುಗಡೆ ಗೊಳಿಸಿದ್ದಾರೆ.





