ಕುಂಬಳೆ: ಅಂಚೆ ಕಚೇರಿಗಾಗಿ ಕಟ್ಟಡ ನಿರ್ಮಿಸುವಾಗ ಸ್ಥಳೀಯರ ಸಂಚಾರ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗುತ್ತಿದೆ ಎಂದು ದೂರಲಾಗಿದೆ. ಅಂಚೆ ಇಲಾಖೆಯ ಅಧೀನದಲ್ಲಿರುವ ಕುಂಬಳೆ ಮೀನು ಮಾರುಕಟ್ಟೆ ಸಮೀಪದ ಸ್ಥಳದಲ್ಲಿ ಅಂಚೆ ಕಚೇರಿ ನಿರ್ಮಿಸುವುದ ರಂಗವಾಗಿ ಹಲವು ಕಾಲಗಳಿಂದ ಸ್ಥಳೀಯರು ಉಪಯೋಗಿಸುತ್ತಿದ್ದ ದಾರಿಯನ್ನು ಮುಚ್ಚಲಾಗಿದೆ ಎಂದು ದೂರಲಾಗಿದೆ. ಅಂಚೆ ಕಚೇರಿಗೆ ಆವರಣಗೋಡೆ ನಿರ್ಮಿಸುವ ಹೆಸರಲ್ಲಿ ಸ್ಥಳೀಯರ ದಾರಿಯನ್ನು ಮುಚ್ಚಲಾಗಿದೆ.
ಕುಂಬಳೆಯ ಬಾಡಿಗೆ ಕಟ್ಟಡದಲ್ಲಿ ಕಾರ್ಯಾಚರಿಸುವ ಅಂಚೆ ಕಚೇರಿಗೆ ಸ್ವಂತವಾಗಿ ಕಟ್ಟಡ ನಿರ್ಮಿಸಲು ಅಂಚೆ ಇಲಾಖೆ ಯೋಜನೆ ಹಾಕಿತ್ತು. ಕಟ್ಟಡದ ಹೆಚ್ಚಿನ ಕಾಮಗಾರಿಗಳು ಪೂರ್ತಿಯಾ ಗಿದೆ. ಇದಕ್ಕೆ ಆವರಣಗೋಡೆ ನಿರ್ಮಿಸುವಾಗ ಈಗ ಇರುವ ಮೀನು ಮಾರುಕಟ್ಟೆಯಿಂದ ಶಾಲಾ ಮೈದಾನ, ಶಾಲೆಗೆ ತೆರಳುವ ಪ್ರಧಾನ ರಸ್ತೆ ಮುಚ್ಚುಗಡೆಗೊಳ್ಳುತ್ತಿದೆ. ಪಂಚಾಯತ್, ಕಂದಾಯ ಕಚೇರಿಗಳು, ಪೊಲೀಸ್ ಸ್ಟೇಷನ್ ಎಂಬಲ್ಲಿಗೆಲ್ಲ ಸಾಗಲು ಸ್ಥಳೀಯರು ಹಲವು ವರ್ಷಗಳಿಂದ ಈ ದಾರಿಯನ್ನು ಉಪಯೋಗಿಸುತ್ತಿದ್ದಾರೆ. ಇಲ್ಲಿ ಈಗ ದಾರಿ ಮುಚ್ಚಿದ ಹಿನ್ನೆಲೆಯಲ್ಲಿ ಸ್ಥಳೀಯರು ಹಾಗೂ ಮೀನುಕಾರ್ಮಿಕರು, ವ್ಯಾಪಾರಿಗಳು ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ದಾರಿಯನ್ನು ಸಂಪೂರ್ಣವಾಗಿ ಮುಚ್ಚದೆ ಗೇಟ್ ಇರಿಸಿ ಆವರಣಗೋಡೆ ನಿರ್ಮಿಸಬೇಕೆಂದು ಮೀನು ಕಾರ್ಮಿಕರು, ವ್ಯಾಪಾರಿಗಳು ಆಗ್ರಹಿಸಿದ್ದಾರೆ.






