ಕಾಸರಗೋಡು: ನಕಲಿ ದಾಖಲು ಪತ್ರಗಳನ್ನು ಸೃಷ್ಟಿಸಿ ಅವಯವ ದಾನ ನಡೆಸುತ್ತಿದ್ದ ಪ್ರಕರಣದ ಪ್ರಧಾನ ಆರೋಪಿಯನ್ನು ಸೆರೆಹಿಡಿಯುವಲ್ಲಿ ಪೊಲೀಸರು ಕೊನೆಗೂ ಸಫಲರಾಗಿದ್ದಾರೆ.
ಕಳನಾಡು ಆಲ್ ನಿಹಾಮತ್ ಮಂಜಿಲ್ ನಿವಾಸಿ ಮುಹಮ್ಮದ್ ನಜೀಬ್ ಕಲ್ಲಟ್ರ (53) ಬಂಧಿತ ಪ್ರಧಾನ ಆರೋಪಿ. ಎರ್ನಾಕುಳಂ ಗ್ರಾಮೀಣ ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಕೆ.ಎಸ್. ಸುದರ್ಶನ್ ನೇತೃತ್ವದ ವಿಶೇಷ ಪೊಲೀಸರ ತಂಡ ಉತ್ತರಪ್ರದೇಶದ ಗಾಸಿಯಾಬಾದ್ ನಿಂದ ಈತನನ್ನು ಸೆರೆಹಿಡಿದಿದೆ. ತನ್ನನ್ನು ಪೊಲೀಸರು ಹುಡುಕಾಡುತ್ತಿ ರುವುದು ಮನಗಂಡ ಆರೋಪಿ ತನ್ನ ಮೊಬೈಲ್ ಫೋನ್ ಸ್ವಿಚ್ ಆಫ್ಮಾಡಿ ವಿಮಾನದಲ್ಲಿ ದೆಹಲಿಗೆ ಹೋಗಿದ್ದನು. ಆ ಬಗ್ಗೆ ಮಾಹಿತಿ ಲಭಿಸಿದ ವಿಶೇಷ ಪೊಲೀಸರ ತಂಡ ಆತನ ಪತ್ತೆಗಾಗಿ ದೆಹಲಿಗೆ ತೆರಳಿತು. ಆ ವೇಳೆ ಆರೋಪಿ ಅಲ್ಲಿಂದ ಗಾಜಿಯಾಬಾದ್ಗೆ ಪರಾರಿಯಾದ ಬಗ್ಗೆ ಪೊಲೀಸರಿಗೆ ಸ್ಪಷ್ಟ ಮಾಹಿತಿ ಲಭಿಸಿತು. ಅದರ ಜಾಡು ಹಿಡಿದು ಪೊಲೀಸರು ಗಾಜಿಯಾಬಾದ್ಗೆ ತೆರಳಿ ಅಲ್ಲ್ಲಿಂದ ಆರೋಪಿಯನ್ನು ಸೆರೆಹಿಡಿ ಯುವಲ್ಲಿ ಸಫಲರಾಗಿದ್ದಾರೆ. ಆ ಮೂಲಕ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾದ ಆರೋಪಿಗಳ ಸಂಖ್ಯೆ ಈಗ ಎಂಟಕ್ಕೇರಿದೆ.
ಎರ್ನಾಕುಳಂನ್ನು ಕೇಂದ್ರವನ್ನಾಗಿಸಿ ಈ ಮಾನವ ಅವಯವ ಕೇಂದ್ರ ಕಾರ್ಯವೆಸಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ನಜೀಬ್ನ ಪತ್ನಿ ಕುನ್ನತ್ತು ನಾಡ್ ಪೆರಿಂಙಾಲ ಬೈತುಲ್ ರಹ್ಮಾ ವೀಟಿಲ್ನ ರಶೀದಾಳನ್ನು ಕುನ್ನತ್ತು ನಾಡು ಪೊಲೀಸರ ಈ ಹಿಂದೆಯೇ ಬಂಧಿಸಿದ್ದರು. ಆಕೆಯ ಹೊರತಾಗಿ ಇತರ ಆರೋಪಿಗಳಾದ ಕುನ್ನತ್ತುನಾಡು ಕುಮಾರಪುರದ ಸನ್ನಿ ವರ್ಗೀಸ್, ಆತನ ಪತ್ನಿ ಸಿನಿ ವರ್ಗೀ ಸ್, ಚೇಲಕುಳಂ ಕವುಂಙಪ್ಪಾರದ ಸನೋಜ್, ರೀಜಾ, ಸುಧೀರ್ ಮತ್ತು ವಿನೋದ್ ಎಂಬವರನ್ನು ಆ ಬಳಿಕ ಪೊಲೀಸರು ಬಂಧಿಸಿದ್ದಾರೆ.
ಕಿಡ್ನಿ ದಾನ ಮಾಡಲು ತಯಾರಾಗುವವರಿಗೆ 20ರಿಂದ 25 ಲಕ್ಷ ರೂ. ನೀಡುವ ಭರವಸೆ ನೀಡಿ ಬಳಿಕ ಕಿಡ್ನಿ ಅಗತ್ಯವಿರುವವರಿಂದ 1 ಕೋಟಿ ರೂ. ವನ್ನು ಈ ಜಾಲ ದವರು ಕೇಳಿ ಪಡೆಯುತ್ತಿದ್ದರೆಂಬ ಸ್ಪಷ್ಟ ಮಾಹಿತಿ ಲಭಿಸಿದೆಯೆಂದೂ ಇದಕ್ಕಾಗಿ ಇವರು ನಕಲಿ ದಾಖಲು ಪತ್ರಗಳನ್ನು ತಯಾರಿಸಿ ಅದನ್ನು ಬಳಸುತ್ತಿದ್ದಾರೆಂದೂ ಪೊಲೀಸರು ತಿಳಿಸಿದ್ದಾರೆ.
ಬಂಧಿತ ಪ್ರಧಾನ ಆರೋಪಿಯನ್ನು ಸಮಗ್ರ ವಿಚಾರಣೆಗೊಳ ಪಡಿಸಲಾಗುತ್ತಿದೆ.






