ಕಾಸರಗೋಡು: ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಜಿಲ್ಲೆಯಲ್ಲಿ ಡೀಲ್ ನಡೆದದ್ದು ಎಡರಂಗ ಮತ್ತು ಎನ್ಡಿಎ ಮಧ್ಯೆ ಅಲ್ಲ, ಬದಲಾಗಿ ಯುಡಿಎಫ್ ಮತ್ತು ಎನ್ಡಿಎ ನಡುವೆ ಎಂದು ಸಿಪಿಎಂ ರಾಜ್ಯ ಸೆಕ್ರೆಟರಿಯೇಟ್ ಸದಸ್ಯ ಎಂ.ವಿ. ಜಯರಾಜನ್ ಹೇಳಿದ್ದಾರೆ. ಕಾಸರ ಗೋಡಿನಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು. ಕಾಸರಗೋಡಿನಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಶಾನವಾಸ್ ಪಾದೂರುರನ್ನು ಎಡರಂಗದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಗಳಿಸಿದ್ದು, ಬಿಜೆಪಿಗೆ ಸಹಾಯ ಒದಗಿಸುವ ಉದ್ದೇಶದಿಂದ ಎಡರಂಗ ಮತ್ತು ಬಿಜೆಪಿ ಮಧ್ಯೆ ಮಾಡಿಕೊಳ್ಳಲಾದ ಒಂದು ಡೀಲ್ ಆಗಿದೆಯೆಂದು ಯುಡಿಎಫ್ ಆರೋಪಿಸಿದ್ದು, ಅದಕ್ಕೆ ಜಯರಾಜ್ ಈ ಪ್ರತಿಕ್ರಿಯೆ ನೀಡಿದ್ದಾರೆ. ಶಾನವಾಸ್ ಪಾದೂರುರನ್ನು ಒಂದು ವೇಳೆ ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆಗಿಳಿಸುತ್ತಿದ್ದಲ್ಲಿ ಯುಡಿಎಫ್ನವರು ಇದೇ ಆರೋಪ ಹೊರಿಸುತ್ತಿದ್ದರು. ಎಲ್ಲಾ ಧರ್ಮೀಯರೂ ಶಾನವಾಸ್ರಿಗೆ ಮತ ನೀಡುತ್ತಿದ್ದಾರೆ. ಮತಯಾಚನೆಗಾಗಿ ಎಲ್ಲಾ ಮನೆಗಳಿಗೆ ಸಂದರ್ಶಿಸುವ ಸ್ವಾತಂತ್ರ್ಯ ಅವರು ಹೊಂದಿದ್ದಾರೆ. ಇದು ವಿರೋಧಪಕ್ಷಗಳಿಗೆ ತಲೆನೋವಾಗಿ ಪರಿಣಮಿಸುತ್ತಿದೆ. ಮಂಜೇಶ್ವರದಲ್ಲೂ ಯುಡಿಎಫ್ ಮತ್ತು ಎನ್ಡಿಎ ಮಧ್ಯೆ ಡೀಲ್ ಮಾಡಿಕೊಳ್ಳಲಾಗಿ ದೆಯೆಂದು ಜಯರಾಜನ್ ಆರೋಪಿಸಿದ್ದಾರೆ. ಕಾಂಗ್ರೆಸಿಗರು ಬಿಜೆಪಿ ಪರ ವಕಾಲತ್ತು ವಹಿಸುತ್ತಿರುವುದಾದರೂ ಯಾತಕ್ಕಾಗಿ ಎಂದೂ ಅವರು ಪ್ರಶ್ನಿಸಿದ್ದಾರೆ.






