ಕುಂಬಳೆ: ಕ್ವಾರ್ಟರ್ಸ್ನಲ್ಲಿ ಇಂದು ಬೆಳಿಗ್ಗೆ ಸಂಭವಿಸಿದ ಗ್ಯಾಸ್ ಸ್ಫೋಟದಿಂದ ಕಟ್ಟಡ ಬೆಂಕಿಗಾಹುತಿಯಾಗಿದೆ. ಮಾಟಂಗುಳಿಯಲ್ಲಿ ಹಲವಾರು ಮಂದಿ ವಾಸ ಮಾಡುವ ಕ್ವಾರ್ಟರ್ಸ್ನಲ್ಲಿ ಘಟನೆ ಸಂಭವಿಸಿದೆ. ಕ್ವಾರ್ಟರ್ಸ್ನ ಒಂದು ಕುಟುಂಬದ ವಾಸಕೊಠಡಿ ಸಂಪೂರ್ಣವಾಗಿ ಉರಿದಿದ್ದು, ಉಳಿದ ಕಡೆ ಬೆಂಕಿ ಹರಡುವುದನ್ನು ಅಗ್ನಿಶಾಮಕದಳ ಹಾಗೂ ಪೊಲೀಸರು, ಸ್ಥಳೀಯರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ತಡೆಯಲಾಗಿದೆ.
ಚರ್ಮುರಿ ವ್ಯಾಪಾರಿ, ಶೊರ್ನೂರು ನಿವಾಸಿ ಕೃಷ್ಣ ಹಾಗೂ ಕುಟುಂಬ ಕ್ವಾರ್ಟರ್ಸ್ನಲ್ಲಿ ವಾಸಿಸುತ್ತಿತ್ತು. ಇವರು ಕಳೆದ ಸೋಮವಾರ ಊರಿಗೆ ತೆರಳಿದ್ದರು. ಇಂದು ಬೆಳಿಗ್ಗೆ ಗ್ಯಾಸ್ ಸ್ಫೋಟಗೊಂಡು ಬೆಂಕಿ ಅನಾಹುತ ಸಂಭವಿಸಿದೆ. ಕ್ವಾರ್ಟರ್ಸ್ಗಿದ್ದ ವಿದ್ಯುತ್ ಸಂಪರ್ಕವನ್ನು ವಿದ್ಯುತ್ ಇಲಾಖೆ ವಿಚ್ಛೇಧಿಸಿದೆ. ೧೦ರಷ್ಟು ಕೊಠಡಿಗಳಿರುವ ಹೆಂಚು ಹಾಸಿದ ಕ್ವಾರ್ಟರ್ಸ್ನಲ್ಲಿದ್ದ ಉಳಿದವರನ್ನು ಅಲ್ಲಿಂದ ತೆರವುಗೊಳಿಸ ಲಾಗಿದೆ. ಬೆಂಕಿ ತಗಲಿ ಕೊಠಡಿಯಲ್ಲಿದ್ದ ಎಲ್ಲಾ ಸಾಮಗ್ರಿಗಳೂ ಉರಿದು ಭಸ್ಮವಾಗಿದೆ. ಮಾಹಿತಿ ತಿಳಿದು ಕುಂಬಳೆ ಠಾಣೆ ಇನ್ಸ್ಪೆಕ್ಟರ್ ಬೈಜು ಕೆ. ಜೋಸ್ ನೇತೃತ್ವದಲ್ಲಿ ಹಾಗೂ ಕಾಸರಗೋಡಿನ ಅಗ್ನಿಶಾಮಕದಳದ ಎರಡು ತಂಡ ಸ್ಥಳಕ್ಕೆ ತಲುಪಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದೆ.





