ಕಾಸರಗೋಡು: ಜನರಲ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಧ್ಯೆ ೯ ವರ್ಷದ ಬಾಲಕ ಮೃತಪಟ್ಟ ಘಟನೆಯಲ್ಲಿ ಮರಣೋತ್ತರ ಪರೀಕ್ಷಾ ಪ್ರಾಥಮಿಕ ವರದಿ ಲಭ್ಯವಾಗಿದೆ. ಬೇಡಗಂ ತಲೇಕುನ್ನು ನಿವಾಸಿ ಮುಹಮ್ಮದ್ ಇಯಾಸ್ ಎಂಬ ಬಾಲಕ ಮೃತಪಟ್ಟಿರುವುದು ಶಸ್ತ್ರಚಿಕಿತ್ಸೆ ಮಧ್ಯೆ ಉಂಟಾದ ಹೃದಯಾಘಾತ ದಿಂದಾಗಿದೆಯೆಂದು ಪ್ರಾಥಮಿಕ ವರದಿಯಲ್ಲಿ ಸೂಚಿಸಲಾ ಗಿದೆ. ಇದೇ ವೇಳೆ ಶಸ್ತ್ರಚಿಕಿತ್ಸೆ ವೇಳೆ ಲೋಪ ಅಥವಾ ತಾಂತ್ರಿಕ ಲೋಪ ಪತ್ತೆಹಚ್ಚಲು ಸಾಧ್ಯವಾಗಿಲ್ಲವೆಂದು ತನಿಖಾಧಿಕಾರಿಗೆ ಲಭಿಸಿದ ಪ್ರಾಥಮಿಕ ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿದ ಪೊಲೀಸ್ ಸರ್ಜನ್ ತನಿಖಾ ತಂಡಕ್ಕೆ ನೀಡಿದ ಪ್ರಾಥಮಿಕ ವರದಿಯಲ್ಲಿ ಈ ವಿಷಯ ಸ್ಪಷ್ಟಪಡಿಸಲಾಗಿದೆ. ಡಾಕ್ಟರ್ರ ಅನಾಸ್ಥೆ ಹಾಗೂ ಶಸ್ತ್ರಚಿಕಿತ್ಸೆಯ ಲೋಪದಿಂದ ಬಾಲಕ ಮೃತಪಟ್ಟಿರುವುದಾಗಿ ಆರೋಪಿಸಿ ಹೆತ್ತವರು ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಮೃತದೇಹವನ್ನು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಂಡೊಯ್ದು ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು.






