ಸ್ಕೂಟರ್‌ಗಳು ಪರಸ್ಪರ ಢಿಕ್ಕಿ: ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಸವಾರ ಮೃತ್ಯು

ಮಂಜೇಶ್ವರ: ಸ್ಕೂಟರ್‌ಗಳು ಪರಸ್ಪರ ಢಿಕ್ಕಿ ಹೊಡೆದು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಸವಾರ ಮೃತಪಟ್ಟ ಘಟನೆ ನಡೆದಿದೆ. ಪೈವಳಿಕೆ ಬಳಿಯ ಕಳಾಯಿ ಕುಂಟುಕೊಳಂಜೆ ನಿವಾಸಿ ಹಿರಿಯ ಕೃಷಿಕ ಪುರೋಹಿತರೂ ಆಗಿರುವ ಗೋಪಾಲಕೃಷ್ಣ ಕೆ. ನಲ್ಲೂರಾಯ (68) ಮೃತಪಟ್ಟ ವ್ಯಕ್ತಿ.

ಶನಿವಾರ ಮಧ್ಯಾಹ್ನ ಉಪ್ಪಳ ತುರ್ತಿ ಎಂಬಲ್ಲಿನ ದೈವಸ್ಥಾನದಲ್ಲಿ ವೈದಿಕ ಕಾರ್ಯಕ್ರಮ ಮುಗಿಸಿ ಸ್ಕೂಟರ್‌ನಲ್ಲಿ ಹೊಸಂಗಡಿ ಭಾಗಕ್ಕೆ ಸಂಚರಿಸುತ್ತಿದ್ದ ವೇಳೆ ವಾಮಂಜೂರು ಚೆಕ್‌ಪೋಸ್ಟ್ ಸಮೀಪ   ಹೆದ್ದಾರಿಯಲ್ಲಿ ಇನ್ನೊಂದು ಸ್ಕೂಟರ್ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಇದರಿಂದ ತಲೆಗೆ ಗಂಭೀರ ಗಾಯಗೊಂಡ ಇವರನ್ನು ದೇರಳಕಟ್ಟೆಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದ ಸಂಜೆ ವೇಳೆ ಮೃತಪಟ್ಟಿದ್ದಾರೆ. ನಿನ್ನೆ ಮಧ್ಯಾಹ್ನ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಮನೆಗೆ ತಲುಪಿಸಿ ಅಂತ್ಯ ಸಂಸ್ಕಾರ ನಡೆಸಲಾಯಿತು. ಮೃತರು ಪತ್ನಿ ಕುಸುಮ, ಮಕ್ಕಳಾದ ಗುರುರಾಜ್, ಶ್ರೀನಿಧಿ, ಪೂರ್ಣೇಶ್, ಸೊಸೆ ಲಾವಣ್ಯ, ಸಹೋದರರಾದ ಸುಬ್ರಹ್ಮಣ್ಯ ನಲ್ಲೂರಾಯ, ರಂಗನಾಥ ನಲ್ಲೂರಾಯ, ಸತ್ಯಮೂರ್ತಿ ನಲ್ಲೂರಾಯ, ಸಹೋದರಿಯರಾದ ಕಾವೇರಿಯಮ್ಮ, ವಿಜಯಲಕ್ಷ್ಮಿ, ಮಲ್ಲಿಕ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಇದೇ ವೇಳೆ ಅಪಘಾತದಲ್ಲಿ ಇನ್ನೊಂದು ಸ್ಕೂಟರ್ ಸವಾರ ಕೂಡಾ ಗಾಯಗೊಂಡಿದ್ದಾನೆ. ಅಪಘಾತಕ್ಕೆ ಸಂಬಂಧಿಸಿ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

You cannot copy contents of this page