ಬದಿಯಡ್ಕ: ಬಡಗು ಶಬರಿಮಲೆಯೆಂದೇ ಪ್ರಸಿದ್ಧವಾದ ಉಬ್ರಂಗಳ ಶ್ರೀ ಮಹಾದೇವ ಪಾರ್ವತಿ ಶ್ರೀ ಶಾಸ್ತಾರ ದೇವಸ್ಥಾನದಲ್ಲಿ ನಿರ್ಮಿಸಿದ ಹಿತ್ತಾಳೆ ಕವಚದ 18 ಮೆಟ್ಟಿಲುಗಳ ಲೋಕಾರ್ಪಣೆ ಹಾಗೂ ಶ್ರೀ ದೇವರ ಭವ್ಯ ಮಹೋತ್ಸವ ಮೇ 11ರಂದು ನಡೆಯಲಿದೆ.
ಅಂದು ಸಂಜೆ 5 ಗಂಟೆಗೆ ಧಾರ್ಮಿಕ ಸಭೆ ನಡೆಯಲಿದೆ. 6.30ಕ್ಕೆ 101 ಚೆಂಡೆ ವಾದ್ಯಗಳೊಂದಿಗೆ ಹಿತ್ತಾಳೆ ಕವಚದ 18 ಮೆಟ್ಟಿಲುಗಳ ದ್ವಾರಪೂಜೆ ಹಾಗೂ ಲೋಕಾರ್ಪಣೆ ನಡೆಯಲಿರು ವುದು. ಶ್ರೀ ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠಾಧೀಶರಾದ ಜಗದ್ಗುರು ಶ್ರೀ ಶಂಕರಾಚಾರ್ಯ ಮಹಾಸಂಸ್ಥಾನ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳ ಕರಕಮಲ ಸಂಜಾತರಾದ ಜಗದ್ಗುರು ಶಂಕರಾಚಾರ್ಯ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳು ಹಾಗೂ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನ ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಈ ಪುಣ್ಯಕಾರ್ಯವನ್ನು ಉದ್ಘಾಟಿಸಿ ಆಶೀರ್ವಚನ ನೀಡುವರು. ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿ, ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ಶಬರಿಮಲೆ ಪಂದಳದ ಶ್ರೀ ನಾರಾಯಣ ವರ್ಮ ಸೇರಿದಂತೆ ಹಲವರು ಗಣ್ಯರು ಉಪಸ್ಥಿತರಿರುವರು. ರಾತ್ರಿ ೮ಕ್ಕೆ ಶ್ರೀ ದೇವರ ಭವ್ಯ ಮಹೋತ್ಸವ ಹಾಗೂ ಭೋಜನ ಪ್ರಸಾದ ನಡೆಯಲಿದೆ. ಕಾರ್ಯಕ್ರಮಗಳ ಕುರಿತು ವಿವರಿಸಲು ಕರೆದ ಸುದ್ಧಿಗೋಷ್ಠಿಯಲ್ಲಿ ಶ್ರೀ ಕ್ಷೇತ್ರದ ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಕಿರಣ್ ಕುಮಾರ್ ಕುಣಿಕುಳ್ಳಾಯ, ಉತ್ಸವ ಸಮಿತಿ ಅಧ್ಯಕ್ಷ ಹರಿನಾರಾಯಣ ಮಾಸ್ತರ್ ಶಿರಂತ್ತಡ್ಕ, ಉತ್ಸವ ಸಮಿತಿ ಅಧ್ಯಕ್ಷ ರಾಜೇಶ್ ಮಾಸ್ತರ್ ಅಗಲ್ಪಾಡಿ, ಗೋವಿಂದ ರಾಜ್ ಮೈಲ್ತೊಟ್ಟಿ ಮೊದಲಾದವರು ಭಾಗವಹಿಸಿದರು.






