ಕಾಸರಗೋಡು: ಎಂಜಿ ರಸ್ತೆ ಹಾಗೂ ಬ್ಯಾಂಕ್ರಸ್ತೆಯನ್ನು ಜೋಡಿಸುವ ನಾಯಕ್ಸ್ ರಸ್ತೆ ಹೊಂಡ ಗುಂಡಿಗಳಿಂದ ತುಂಬಿಕೊಂಡು ಸಂಚಾರಕ್ಕೆ ಅಯೋಗ್ಯವಾಗಿ ರಸ್ತೆ ತಡೆಗೆ ಕಾರಣವಾಗುತ್ತಿದೆ ಎಂದು ದೂರಲಾಗಿದೆ. ಬ್ಯಾಂಕ್ ರಸ್ತೆಯಿಂದ ನಾಯಕ್ಸ್ ರಸ್ತೆಗೆ ಪ್ರವೇಶಿಸುವ್ಗ ಸಿನಿಮಾ ಥಿಯೇಟರ್ ವರೆಗೆ ರಸ್ತೆ ಪೂರ್ಣವಾಗಿ ಹಾನಿಗೊಂಡಿದೆ.
ನಾಯಕ್ಸ್ ರಸ್ತೆಯಿಂದ ಕಾಸರಗೋಡು ಬ್ಲೋಕ್ ಪಂಚಾಯತ್ ಕಚೇರಿಗೆ ತೆರಳುವ ರಸ್ತೆಯ ಸಮೀಪದಲ್ಲಿ ಚರಂಡಿಗೆ ಸ್ಲ್ಯಾಬ್ ಇಲ್ಲದ ಕಾರಣ ಅಪಘಾತ ಬೆದರಿಕೆ ಉಂಟಾಗಿದೆ. ಬ್ಯಾಂಕ್ ರಸ್ತೆಯಿಂದ ನಾಯಕ್ಸ್ ರಸ್ತೆಗೆ ಪ್ರವೇಶಿಸುವ ಸ್ಥಳದಿಂದ ರಸ್ತೆ ಕೊನೆಗೊಳ್ಳುವ ಚಂದ್ರಗಿರಿ ಜಂಕ್ಷನ್ವರೆಗೆ ರಸ್ತೆಯನ್ನು ಅಗಲಗೊಳಿಸಿ ಚರಂಡಿ ವ್ಯವಸ್ಥೆಯನ್ನು ಸಮರ್ಪಕಗೊಳಿಸಬೇಕೆಂದು, ಅಪಾಯಕರವಾದ ರೀತಿಯಲ್ಲಿರುವ ಮರಗಳನ್ನು ಮುರಿದು ತೆಗೆಯಬೇಕೆಂದು ಮುಸ್ಲಿಂ ಯೂತ್ ಲೀಗ್ ಆಗ್ರಹಿಸಿದೆ. ಈ ಬಗ್ಗೆ ನಗರಸಭಾ ಸಮಿತಿ ನಗರಸಭಾ ಅಧ್ಯಕ್ಷೆ ಶಾಹಿನಾ ಸಲೀಂರಿಗೆ ಮನವಿ ನೀಡಿದೆ. ಮಳೆಗಾಲ ಆರಂಭಗೊಂಡರೆ ಸಂಚಾರ ತಡೆ ತೀವ್ರಗೊಳ್ಳಬಹುದಾದ ಆತಂಕ ಈ ರಸ್ತೆಯ ಪರಿಸರದಲ್ಲಿರುವ ವ್ಯಾಪಾರಿಗಳು ವ್ಯಕ್ತಪಡಿಸಿದ್ದಾರೆ.







