ಟಯರ್ ಪಂಕ್ಚರ್ ಆಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಗುಚಿ ಬಿದ್ದ ಲಾರಿ: ಚಾಲಕ ಪಾರು

ಕಾಸರಗೋಡು: ಕಲ್ಲಿಕೋಟೆ ಭಾಗದಿಂದ ಉಳ್ಳಾಲಕ್ಕೆ ಹೋಗುತ್ತಿದ್ದ ಮೀನು ಹೇರಿದ ಲಾರಿ ಮೊಗ್ರಾಲ್  ಪುತ್ತೂರು  ರಾಷ್ಟ್ರೀಯ ಹೆದ್ದಾರಿಯಲ್ಲಿ ಟಯರ್ ಪಂಕ್ಚರ್ ಆಗಿ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಘಟನೆ ನಿನ್ನೆ ರಾತ್ರಿ ೮ ಗಂಟೆಗೆ ನಡೆದಿದೆ.

ಲಾರಿಮಗುಚಿಬಿದ್ದ ಪರಿಣಾಮ ಅದರಲ್ಲಿದ್ದ ಮೀನು ರಸ್ತೆಯಿಡೀ ಚೆಲ್ಲಾಪಿಲ್ಲಿಯಾಗಿ ಬಿದ್ದವು.  ಲಾರಿಯಲ್ಲಿ ಚಾಲಕ ಮಾತ್ರವೇ ಇದ್ದು ಅವರು ಅದೃಷ್ಟವಶಾತ್ ಸಂಭಾವ್ಯ ಭಾರೀ ಅನಾಹುತದಿಂದ  ಪಾರಾಗಿದ್ದಾರೆ. ವಡಗರೆ ನಿವಾಸಿ ವಿಜಿನ್ ಕುಮಾರ್ (35)  ಈ ಅಪಾಯದಿಂದ ಪಾರಾದ ಲಾರಿ ಚಾಲಕ.

ಮೀನು ಲಾರಿ ಮಗುಚಿಬಿದ್ದ ಪರಿಣಾಮ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಮೊಟಕುಗೊಂಡಿತು. ವಿಷಯ ತಿಳಿದ ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಅಫೀಸರ್ ವಿ.ಎನ್. ವೇಣುಗೋಪಾಲನ್ ನೇತೃತ್ವದ ಕಾಸರಗೋಡು ಅಗ್ನಿಶಾಮಕದಳ ತುರ್ತಾಗಿ ಘಟನೆ  ನಡೆದ ಸ್ಥಳಕ್ಕಾಗಮಿಸಿ ಮೊದಲು ರಸ್ತೆಗೆ ಬಿದ್ದಿದ್ದ ಮೀನುಗಳನ್ನು ಇತರ ಎರಡು ಲಾರಿಗಳಲ್ಲಿ ತುಂಬಿಸಿ ಅಲ್ಲಿಂದ ತೆರವುಗೊಳಿಸಿದ ಬಳಿಕ ಯುಎನ್‌ಸಿಸಿಯ ಕ್ರೈನ್ ಉಪಯೋಗಿಸಿ ರಸ್ತೆಗೆ ಬಿದ್ದಿದ್ದ ಮೀನಿನ ಲಾರಿಯನ್ನು ಅಲ್ಲಿಂದ ಮೇಲಕ್ಕೆತ್ತಿ ಬದಿಗೆ ಸರಿಸಿದರು. ನಂತರ ಸಾಬೂನು ಹುಡಿಯನ್ನು ರಸ್ತೆಯುದ್ದಕ್ಕೂ ಸಿಂಪಡಿಸಿ  ನೀರು ಹಾಯಿಸುವ ಮೂಲಕ ರಸ್ತೆಯಿಂದ ಮೀನಿನ ಕೊಳಕು ನೀರು ಹಾಗೂ ಆಯಿಲ್‌ನ್ನು ಶುಚೀಕರಿಸಿದರು. ನಂತರ ರಾತ್ರಿ 11 ಗಂಟೆ ಬಳಿಕವಷ್ಟೇ ಈ ದಾರಿಯಾಗಿ ಸಂಚಾರ ಪುನರಾರಂಭಗೊಂಡಿತು. ರಕ್ಷಣಾ  ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕದಳದ ಎರಡು ಇಂಜಿನ್‌ಗ ಳನ್ನು ಉಪಯೋಗಿಸಲಾಯಿತು. ರಕ್ಷಣಾ ಕಾರ್ಯಾಚರಣೆಯಲ್ಲಿ ಅಗ್ನಿಶಾಮದಳದ ಇತರ ಸಿಬ್ಬಂದಿಗಳಾದ ಇ. ಪ್ರಸೀದ್, ಸಿ.ವಿ. ಶಿಬಿಲ್ ಕುಮಾರ್, ಪಿ.ರಾಜೇಶ್, ಎಸ್. ಅರುಣ್ ಕುಮಾರ್, ಕೆ.ವಿ. ಜಿತಿನ್‌ಕೃಷ್ಣನ್, ಜೆ.ಬಿ. ಜಿಜೋ, ಹೋಂಗಾರ್ಡ್‌ಗಳಾದ ಪಿ.ವಿ. ರಂಜನ್ ಮತ್ತು ಕೆ. ಸುಮೇಶ್ ಎಂಬಿವರು ಒಳಗೊಂಡಿದ್ದರು.

You cannot copy contents of this page