ಉಪ್ಪಳ: ಉಪ್ಪಳ ರೈಲ್ವೇ ನಿಲ್ದಾಣ ಪರಿಸರ ರಸ್ತೆ ಸಂಚಾರಕ್ಕೆ ಅಯೋಗ್ಯಗೊಂಡಿರುವುದಾಗಿ ವಾಹನಚಾಲಕರು ದೂರಿದ್ದಾರೆ. ರೈಲ್ವೇ ಇಲಾಖೆಯ ಅಧೀನದಲ್ಲಿರುವ ಈ ರಸ್ತೆಯ 150 ಮೀಟರ್ನಷ್ಟು ಭಾಗದಲ್ಲಿ ಹಲವಾರು ವರ್ಷಗಳಿಂದ ದುರಸ್ತಿಗೊಳಿಸದೆ ಇರುವುದರಿಂದಾಗಿ ಹೊಂಡಗಳಿಂದ ಕೂಡಿ ಸಂಚಾರ ದುಸ್ತರವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ರೈಲ್ವೇ ನಿಲ್ದಾಣಕ್ಕೆ ತಲುಪುವರು, ಈ ಭಾಗದಲ್ಲಿ ವಾಸಿಸುವ ನೂರಾರು ಕುಟುಂಬಗಳು ಉಪ್ಪಳ ಪೇಟೆ ಸಹಿತ ವಿವಿಧ ಕಡೆಗಳಿಗೆ ತೆರಳಲು ಇದೇ ರಸ್ತೆಯನ್ನು ಆಶ್ರಯಿಸುತ್ತಿದ್ದಾರೆ.
ಮಳೆಗಾಲದಲ್ಲಿ ಈ ರಸ್ತೆಯಲ್ಲಿ ನೀರು ಹರಿಯುತ್ತಿದ್ದು, ಇದರಿಂದಾಗಿ ಬೃಹತ್ ಹೊಂಡಗಳು ಸೃಷ್ಟಿಯಾಗಿವೆ. ಈ ಹೊಂಡಗಳಲ್ಲಿ ನೀರು ತುಂಬಿ ಕೆಸರುಮಯವಾಗಿ ವಾಹನ ಸಂಚಾರ, ನಡೆದುಕೊಂಡು ಹೋಗುವುದಕ್ಕೂ ಸಮಸ್ಯೆಯಾಗಿದೆ ಎಂದು ದೂರಲಾಗಿದೆ. ರೈಲು ನಿಲ್ದಾಣ ಪರಿಸರದಲ್ಲಾಗಿ ಮಣಿಮುಂಡ ಭಾಗಕ್ಕೆ ತೆರಳುವ ರಸ್ತೆ ಕೂಡಾ ಇದಾಗಿದೆ. ಸಂಬಂಧಪಟ್ಟವರು ಶೀಘ್ರವೇ ದುರಸ್ತಿಗೊಳಿಸಿ ಸಂಚಾರಯೋಗ್ಯ ಗೊಳಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.






