ವಾಹನ ಅಪಘಾತ: ಗಂಭೀರ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಯುವಕ ಮೃತ್ಯು

ಕುಂಬಳೆ: ಕಾಸರಗೋಡು- ಕಾಞಂಗಾಡ್ ಕೆಎಸ್‌ಟಿಪಿ ರಸ್ತೆಯ ಮೇಲ್ಪರಂಬ ಕಟ್ಟೆಕ್ಕಾಲ್‌ನಲ್ಲಿ ಸಂಭವಿಸಿದ ವಾಹನ ಅಪಘಾತದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಯುವಕ ಇಂದು ಮುಂಜಾನೆ ಮೃತಪಟ್ಟನು. ಕುಂಬಳೆ ಕುಂಟಂಗೇರಡ್ಕ ವೆಲ್ಫೇರ್ ಶಾಲೆ ಬಳಿಯ ಪುಷ್ಪ ನಿವಾಸ್‌ನ ವಿನೋದ್ ಎಂಬವರ ಪುತ್ರ ವಿನೀಶ್ ವಿ.ಎಸ್. (23) ಮೃತಪಟ್ಟ ದುರ್ದೈವಿಯಾಗಿದ್ದಾರೆ.

ವಿನೀಶ್ ಮೇಲ್ಪರಂಬದಲ್ಲಿ ಲೈಟ್ ಆಂಡ್ ಸೌಂಡ್ಸ್ ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಕಳೆದ ಅಕ್ಟೋಬರ್ ೧೬ರಂದು ಬೆಳಿಗ್ಗೆ ಇವರು ಕಳನಾಡ್ ಭಾಗದಿಂದ ಬೈಕ್‌ನಲ್ಲಿ ತೆರಳುತ್ತಿದ್ದಾಗ ಎದುರಿನಿಂದ ಬಂದ ಸ್ಕೂಟರ್ ಢಿಕ್ಕಿ ಹೊಡೆದಿತ್ತು. ಇದರಿಂದ ವಿನೀಶ್ ರಸ್ತೆಗೆ ಬಿದ್ದಿದ್ದು ಈ ವೇಳೆ ಬಂದ ಕೆಎಸ್‌ಆರ್‌ಟಿಸಿ ಬಸ್ ಅವರ ದೇಹದ ಮೇಲೆ ಸಂಚರಿಸಿರುವುದಾಗಿ ಮೇಲ್ಪರಂಬ ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ತಿಳಿಸಲಾಗಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ವಿನೀಶ್‌ರನ್ನು ದೇರಳಕಟ್ಟೆ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ನಿಧನ ಸಂಭವಿಸಿದೆ.

ಮೃತರು ತಂದೆ, ತಾಯಿ ಶಶಿಕಲ, ಸಹೋದರ ವಿಜಿತ್, ಸಹೋದರಿ ಕೃಷ್ಣಪ್ರಿಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆ ಬಳಿಕ ಮನೆಗೆ ತಲುಪಿಸಿ ಕುಂಟಂಗೇರಡ್ಕ ಸಾರ್ವಜನಿಕ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗುವುದೆಂದು ಸಂಬಂಧಿಕರು ತಿಳಿಸಿದ್ದಾರೆ.

RELATED NEWS

You cannot copy contents of this page