ಪಾಲಕ್ಕಾಡ್: 25ರ ಹರೆಯದ ಸೇಲಂ ನಿವಾಸಿ ಬಾಡಿಗೆ ಮನೆಯಲ್ಲಿ ನಿಗೂಢ ರೀತಿಯಲ್ಲಿ ಮೃತಪಟ್ಟ ಘಟನೆ ನಡೆದಿದೆ. ಆತೂರು ಪೋತನಾಯಕನ್ ಪಾಳಯಂ ಪುದುಕೋತ್ತಂಪಡಿ ನಿವಾಸಿ ಕೃಷ್ಣವೇಣಿಯ ಮೃತದೇಹ ಈ ರೀತಿಯಲ್ಲಿ ಪತ್ತೆಯಾಗಿದೆ. ತೆನ್ನಾಡಿ ಬಜಾರ್ ವಿವೇಕಾನಂದ ರಸ್ತೆಯ ಬಾಡಿಗೆ ಮನೆಯಲ್ಲಿ ನಿನ್ನೆ ರಾತ್ರಿ ಕೃಷ್ಣವೇಣಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
10 ವರ್ಷಗಳಿಂದ ಒಟ್ಟೆಪ್ಪಾಲಂ ಹಾಗೂ ಪರಿಸರದಲ್ಲಿ ಇವರು ಬಾಡಿಗೆಗೆ ವಾಸಮಾಡುತ್ತಿದ್ದರು. ಪತಿ ಆತೂರು ನಿವಾಸಿ ಮಣಿಕಂಠನ್ ನಿರಂತರ ಮದ್ಯಪಾನ ಗೈದು ಮನೆಯಲ್ಲಿ ಗಲಾಟೆ ನಡೆಸುತ್ತಿದ್ದುದು ಸಾಮಾನ್ಯವಾಗಿತ್ತೆಂದು ನೆರೆಮನೆ ನಿವಾಸಿಗಳು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಕೊಲೆ ಕೃತ್ಯವಾಗಿರಬ ಹುದೆಂಬ ಶಂಕೆಯಲ್ಲಿ ಮಣಿಕಂಠ ನನ್ನು ಪೊಲೀಸರು ಕಸ್ಟಡಿಗೆ ತೆಗೆದು ಪ್ರಶ್ನಿಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕವೇ ಸಾವಿಗೆ ಕಾರಣವೇನೆಂಬ ಬಗ್ಗೆ ತಿಳಿದು ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಯುವತಿ ಪತಿ, ತಾಯಿ ಕಾವೇರಿ, ತಂದೆ ವೆಂಕಿಟಾಚಲಂ, ಸಹೋದರರಾದ ಮಣಿಕಂಠನ್, ಚಿನ್ನಯ್ಯ, ಸಹೋದರಿಯರಾದ ಮಲರ್, ಸೆಲ್ವಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.






