ಬಾಯಾರು: ಖ್ಯಾತ ಯಕ್ಷಗಾನ ಕಲಾವಿದ ಪೆರುವಾಯಿ ನಾರಾಯಣ ಶೆಟ್ಟಿ (೮೨) ನಿನ್ನೆ ರಾತ್ರಿ ನಿಧನ ಹೊಂದಿದರು. ಯಕ್ಷಗಾನದ ಪರಂಪರಾಗತ ಕೊಂಡಿಯೊಂದು ಇವರ ನಿಧನದಿಂದ ಕಳಚಿದಂತಾ ಗಿದೆ. ಕಂಚಿನ ಕಂಠ, ಶ್ರುತಿಬದ್ಧ ಮಾತು, ಅರ್ಥಪೂರ್ಣ ಸಂಭಾಷಣೆಗೆ ಹೆಸರಾಗಿದ್ದ ಇವರು ಸುಮಾರು ೫೦ ವರ್ಷಕ್ಕೂ ಅಧಿಕ ಯಕ್ಷಗಾನ ಮೇಳಗಳಲ್ಲಿ ಸೇವೆ ಗೈದಿದ್ದಾರೆ. ಧರ್ಮಸ್ಥಳ, ಕಟೀಲು, ಕುಂಡಾಪು, ಕುಂಬಳೆ, ಕದ್ರಿ, ಸಹಿತ ವಿವಿಧ ಯಕ್ಷಗಾನ ಮೇಳಗಳಲ್ಲಿ ಸೇವೆಗೈದ ಇವರು ವಿವಿಧ ಕಥಾಪಾತ್ರಗಲ್ಲಿ ತನ್ನದೇ ಛಾಪು ಮೂಡಿಸಿದ್ದಾರೆ. ಕನ್ನಡ ಪೌರಾಣಿಕ ಪ್ರಸಂಗಗಳಲ್ಲಿ ಹಿರಣ್ಯಕಶಿಪು, ರಕ್ತಬೀಜ, ಕಂಸ, ಸುಂದರ ರಾವಣ, ಋತುಪರ್ಣ, ಹನುಮಂತ, ಜಾಬಾಲಿ, ಶಿಶುಪಾಲ ಹಾಗೂ ತುಳು ಪ್ರಸಂಗಗಳಲ್ಲಿ ಕೋಟಿ, ದೇವುಪೂಂಜಾ ಮೊದಲಾದ ವುಗಳಿಗೆ ಇವರು ಜೀವ ತುಂಬಿದ್ದಾರೆ.
ತನ್ನ ೧೨ನೇ ವಯಸ್ಸಿನಲ್ಲೇ ಯಕ್ಷಗಾನಕ್ಕೆ ಕಾಲಿಟ್ಟ ಇವರು ಪೈವಳಿಕೆಯ ಐತ್ತಪ್ಪ ಶೆಟ್ಟಿಯವರಿಂದ ನೃತ್ಯ ಅಭ್ಯಾಸ ಮಾಡಿದ್ದರು. ವಿವಿಧ ಸಂಘಸಂಸ್ಥೆಗಳು ಇವರ ಸಾಧನೆಗೆ ಮನ್ನಣೆ ನೀಡಿ ಗೌರವಿಸಿದ್ದವು. ೨೦೧೬ರಲ್ಲಿ ಯಕ್ಷಧ್ರುವ ಪಟ್ಲ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು. ಬಾಕ್ರಬೈಲು ಪಾತೂರಿನಲ್ಲಿ ವಾಸವಾಗಿದ್ದ ಇವರು ಚಂದ್ರಾವತಿ ಹಾಗೂ ಮೂವರು ಪುತ್ರರು, ಇಬ್ಬರು ಪುತ್ರಿಯ ರನ್ನುಸಹಿತ ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ.







