ಸೋಮೇಶ್ವರ ಸಮುದ್ರದಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳ ದುರ್ಮರಣ: ನಾಡಿನಲ್ಲಿ ಶೋಕಸಾಗರ
ಮಂಜೇಶ್ವರ: ಸಮುದ್ರದಲ್ಲಿ ಸ್ನಾನ ಮಾಡುತ್ತಿದ್ದಾಗ ಬಲವಾದ ಅಲೆಗಳಿಗೆ ಸಿಲುಕಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟ ಘಟನೆ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ.
ಕುಂಜತ್ತೂರು ಅಡ್ಕ ನಿವಾಸಿ ಯಶ್ವಿತ್ (೧೭)ನ ಮೃತದೇಹವನ್ನು ದೇವಿಪುರದ ಸ್ಮಶಾನದಲ್ಲೂ, ಕುಂಜತ್ತೂರು ಮಜಲ್ನ ಯುವರಾಜ್ (೧೭)ನ ಮೃತದೇಹವನ್ನು ಕುಂ ಜತ್ತೂರಿನ ಮಹಾಲಿಂಗೇಶ್ವರ ಸ್ಮಶಾನದಲ್ಲಿ ಸಂಬಂಧಿಕರ ಸಹಿತ ನೂರಾರು ಮಂದಿಯ ಅಂತಿಮ ನಮನದ ಬಳಿಕ ಅಂತ್ಯ ಸಂಸ್ಕಾರ ನಡೆಸಲಾಯಿತು.
ಉಳ್ಳಾಲ ಸೋಮೇಶ್ವರದ ಪರಿಜ್ಞಾನ ಪಿಯು ಕಾಲೇಜಿನ ದ್ವಿತೀಯ ವರ್ಷ ಪಿಯುಸಿ ವಿದ್ಯಾರ್ಥಿಗಳಾದ ಇಬ್ಬರು ಮೊನ್ನೆ ಸಂಜೆ ಸಮುದ್ರದಲ್ಲಿ ಅಪಘಾತಕ್ಕೀಡಾಗಿದ್ದರು. ಸಹಪಾಠಿಗಳೊಂದಿಗೆ ಸೋಮೇಶ್ವರ ಸಮುದ್ರ ಕಿನಾರೆಯಲ್ಲಿ ಸ್ನಾನ ಮಾಡಲೆಂದು ಇವರು ತಲುಪಿದ್ದರು. ಸಮುದ್ರ ಕಿನಾರೆಯಲ್ಲಿರುವ ಬಂಡೆಕಲ್ಲುಗಳಿಗೆ ಹತ್ತಿ ಇಳಿಯುತ್ತಿದ್ದಾಗ ದಿಢೀರ್ ಅಪ್ಪಳಿಸಿದ ಅಲೆಗಳಿಗೆ ಸಿಲುಕಿ ನೀರಿಗೆ ಬಿದ್ದು ಯಶ್ವಿತ್ ಹಾಗೂ ಯುವರಾಜ್ ನಾಪತ್ತೆಯಾಗಿದ್ದರು. ಜತೆಗಿದ್ದವರ ಬೊಬ್ಬೆ ಕೇಳಿ ನಾಗರಿಕರು, ಪೊಲೀಸರು ಹಾಗೂ ಅಗ್ನಿಶಾಮಕದಳ ತಲುಪಿ ರಕ್ಷಣಾ ಕಾರ್ಯಾಚರಣೆ ನಡೆಸಿದರೂ ಪತ್ತೆಹಚ್ಚಲಾಗಲಿಲ್ಲ.
ನಿನ್ನೆ ಬೆಳಿಗ್ಗೆ ಇವರಿಬ್ಬರ ಮೃತದೇಹ ಘಟನೆ ಸ್ಥಳದ ಸುಮಾರು ೨೦೦ ಮೀಟರ್ ದೂರದಲ್ಲಿ ಪತ್ತೆಯಾಗಿದೆ. ದೇರಳಕಟ್ಟೆ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹಗಳನ್ನು ಅವರವರ ಮನೆಗಳಿಗೆ ತಲುಪಿಸಿದ್ದು, ಈ ವೇಳೆ ಸಂಬಂಧಿಕರು, ನಾಗರಿಕರು ಸಹಿತ ನೂರಾರು ಮಂದಿ ತಲುಪಿ ಅಂತಿಮ ನಮನ ಸಲ್ಲಿಸಿದ್ದರು. ಕುಂಜತ್ತೂರು ಅಡ್ಕದ ಶೇಖರ- ಮೀನಾಕ್ಷಿ ದಂಪತಿಯ ಪುತ್ರನಾದ ಯಶ್ವಿತ್ ಸಹೋದರಿ ಗೌತಮಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾನೆ.
ಕುಂಜತ್ತೂರು ಮಜಲ್ನ ಜಯೇಂದ್ರ- ಚಿತ್ರಾಕ್ಷಿ ದಂಪತಿಯ ಪುತ್ರನಾದ ಯುವರಾಜ್ ಓರ್ವ ಸಹೋದರಿ ಸಹಿತ ಅಪಾರ ಬಂಧು ಮಿತ್ರರನ್ನು ಅಗಲಿದ್ದಾನೆ.