ಅಪಘಾತಕ್ಕೀಡಾದ ಬೈಕ್‌ನಿಂದ ರಸ್ತೆಗೆ ಬಿದ್ದ ಸವಾರನ ಮೇಲೆ ಸಂಚರಿಸಿದ ಲಾರಿ: ವ್ಯಕ್ತಿಯ ಸಾವಿನಿಂದ ಶೋಕಸಾಗರ

ಮಂಜೇಶ್ವರ: ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಬೈಕ್‌ನಿಂದ ರಸ್ತೆಗೆಸೆಯಲ್ಪಟ್ಟ ಸವಾರನ ದೇಹದ ಮೇಲೆ ಲಾರಿ ಸಂಚರಿಸಿ ವ್ಯಕ್ತಿ ಮೃತಪಟ್ಟ ದಾರುಣ ಘಟನೆಯಿಂದ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಜೇಶ್ವರದ ಕರೋಡ  ಮಸೀದಿ ಮುಂಭಾಗದಲ್ಲಿ ಮೊನ್ನೆ ಸಂಜೆ ಈ ಅಪಘಾತ ಸಂಭವಿಸಿತ್ತು. ಹೊಸಬೆಟ್ಟು ಕೊಪ್ಪಳ ಕಡಪ್ಪುರ ನಿವಾಸಿ, ಮೀನು ಕಾರ್ಮಿಕನಾದ ಅಬ್ದುಲ್ ಖಾದರ್ (೭೧) ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯಾಗಿದ್ದಾರೆ.

ಇವರು ಬೈಕ್‌ನಲ್ಲಿ ಕುಂಜತ್ತೂರು ಭಾಗದಿಂದ ಉಪ್ಪಳ ಕಡೆಗೆ ನಿರ್ಮಾಣ ಹಂತದಲ್ಲಿರುವ ಸರ್ವೀಸ್ ರಸ್ತೆಯಲ್ಲಿ ಸಂಚರಿಸುತ್ತಿದ್ದಾಗ ಮಂಜೇಶ್ವರದಲ್ಲಿ ಲಾರಿಗೆ ಸೈಡ್ ನೀಡಲು ಬದಿಗೆ ಸರಿಸಿದಾಗ ಬೈಕ್ ನಿಯಂತ್ರಣ ತಪ್ಪಿ ರಸೆಗೆ ಮಗುಚಿಬಿದ್ದಿದೆ.  ರಸ್ತೆಯಿಂದ ಚರಂಡಿಯ ಸ್ಲಾಬ್ ಎತ್ತರ ಇರುವುದೇ ಬೈಕ್ ನಿಯಂತ್ರಣ ತಪ್ಪಲು  ಕಾರಣವೆನ್ನಲಾಗಿದೆ. ರಸ್ತೆಗೆ ಬಿದ್ದ ಕೂಡಲೇ ಹಿಂಬದಿಯಿಂದ ಬಂದ ಲಾರಿ ಅಬ್ದುಲ್ ಖಾದರ್‌ರ  ದೇಹದ ಮೇಲೆ ಸಂಚರಿಸಿದೆ. ಇದರಿಂದ ಸವಾರ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.  ಮೃತರು ಪತ್ನಿಯಂದಿರಾದ ಜೌರ, ಮಂಜೇಶ್ವರ, ಜೌರ ಮುಡಿಪು, ಮಕ್ಕಳಾದ ಶಬೀರ್ ಅಹಮ್ಮದ್, ಖದೀಜ, ನೌಶಾಬಿ, ಫಾತಿಮ್ಮ, ಆಯಿಷತ್ ರಿಝ, ಇರ್ಶಾದ್, ಹರ್ಷಾದ್, ಸೊಸೆ ಮುಮ್ತಾಜ್, ಅಳಿಯಂದಿರಾದ ಅಬ್ದುಲ್ ರಹಿಮಾನ್, ಅಹಮ್ಮದಲಿ, ಆಶಿಫ್, ಅಬ್ದುಲ್ ಲಿಬಾರ್ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಮಂಗಲ್ಪಾಡಿ ತಾಲೂಕು ಆಸ್ಪತ್ರೆಯಲ್ಲಿ ನಿನ್ನೆ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹ ಸಂಬಂಧಿಕರಿಗೆ ಬಿಟ್ಟುಕೊಡಲಾಗಿದೆ. ಅಪಘಾತಕ್ಕೆ ಸಂಬಂಧಿಸಿ ಮಂಜೇಶ್ವರ ಪೊಲೀಸರು ಲಾರಿ ಚಾಲಕನ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

You cannot copy content of this page