ಇಂದು ಕೇರಳ ರಾಜ್ಯೋತ್ಸವ ಸಂಭ್ರಮ: ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮ
ಕಾಸರಗೋಡು: ದೇವರ ಸ್ವಂತ ನಾಡಾದ ಕೇರಳ ರಾಜ್ಯ ರೂಪೀಕರಣಗೊಂಡು ಇಂದಿಗೆ 68 ವರ್ಷ ತುಂಬಿತು. 1956 ನವಂಬರ್ ರಂದು ನಾಡರಸರ ಆಡಳಿತದಲ್ಲಿದ್ದ ಮಲಬಾರ್, ಕೊಚ್ಚಿ, ತಿರುವಿದಾಂಕೂರು ಎಂಬೀ ರಾಜ್ಯಗಳನ್ನು ಒಟ್ಟುಗೂಡಿಸಿ ಕೇರಳ ರಾಜ್ಯ ರೂಪೀಕರಿಸಲಾಯಿತು. ಭಾಷೆಯ ಆಧಾರದ ಮೇಲೆ ರಾಜ್ಯವನ್ನು ರೂಪೀಕರಿಸಲಿರುವ ಭಾರತ ಸರಕಾರದ ನಿರ್ಧಾರದ ಪ್ರಕಾರ ಮಲಯಾಳ ಪ್ರಧಾನ ಭಾಷೆಯಾಗಿದ್ದ ಪ್ರದೇಶಗಳನ್ನು ಸೇರಿಸಿ ಕೇರಳ ರಾಜ್ಯಕ್ಕೆ ರೂಪು ನೀಡಲಾಯಿತು.
14 ಜಿಲ್ಲೆಗಳು, 20 ಲೋಕಸಭಾ ಕ್ಷೇತ್ರಗಳು, 140 ವಿಧಾನಸಭಾ ಕ್ಷೇತ್ರಗಳು ಕೇರಳದಲ್ಲಿದೆ. ಜಗತ್ತಿನ ವಿವಿಧೆಡೆಗಳಲ್ಲಿರುವ ಕೇರಳೀಯರು ಇಂದು ಕೇರಳ ರಾಜ್ಯೋತ್ಸವವನ್ನು ಆಚರಿಸುತ್ತಿದ್ದಾರೆ.
ಕಾಸರಗೋಡು ಜಿಲ್ಲಾಡಳಿತ, ಮಾಹಿತಿ ಸಾರ್ವಜನಿಕ ಜನಸಂಪರ್ಕ ಇಲಾಖೆ ಹಾಗೂ ಜಿಲ್ಲಾ ವಾರ್ತಾ ಕಚೇರಿಯ ನೇತೃತ್ವದಲ್ಲಿ ಇಂದು ಮಲೆಯಾಳ ದಿನಾಚರಣೆ ಹಾಗೂ ಆಡಳಿತ ಭಾಷಾ ವಾರಾಚರಣೆ ಹಮ್ಮಿಕೊಳ್ಳಲಾಗಿದೆ. ಇದರ ಅಂಗವಾಗಿ ಕನ್ನಡ ಸಾಹಿತಿ ಸುಂದರ ಬಾರಡ್ಕ, ಮಲೆಯಾಳದ ಪ್ರಮುಖ ಇತಿಹಾಸಗಾರ ಡಾ. ಸಿ. ಬಾಲನ್ ಅವರನ್ನು ಗೌರವಿಸಲಾಗುವುದು. ಕಲೆಕ್ಟರೇಟ್ನ ಕಾನ್ಫರನ್ಸ್ನಲ್ಲಿ ನಡೆಯುವ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉದ್ಘಾಟಿಸುವರು. ಜಿಲ್ಲಾಧಿಕಾರಿ ಕೆ. ಇಂಭಶೇಖರ್ ಅಧ್ಯಕ್ಷತೆ ವಹಿಸುವರು. ಹಲವರು ಗಣ್ಯರು ಭಾಗವಹಿಸುವರು. ಇದೇ ವೇಳೆ ಸೈನಬ್ ಮೆಮೋರಿಯಲ್ ಬಿಎಡ್ ಕಾಲೇಜು, ಲಯನ್ಸ್ ಕ್ಲಬ್ ಕಾಸರಗೋಡು, ಕಾಸರಗೋಡು ಕಲೆಕ್ಟರೇಟ್ ಸ್ಟಾಫ್ ಕೌನ್ಸಿಲ್ ಎಂಬಿವುಗಳ ನೇತೃತ್ವದಲ್ಲಿ ಸಿವಿಲ್ ಸ್ಟೇಶನ್ನಲ್ಲಿ ಮೆಗಾ ತಿರುವಾದಿರ ನಡೆಯಲಿರುವುದು.