ಕಾಸರಗೋಡಿನ ಎರಡು ಕಡೆಗಳಲ್ಲಿ ಕಾಳಧನ ಬೇಟೆ: ೭ ಲಕ್ಷ ರೂ. ಸಹಿತ ಇಬ್ಬರ ಸೆರೆ
ಕಾಸರಗೋಡು: ನಗರದ ಎರಡು ಕಡೆಗಳಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಏಳು ಲಕ್ಷ ರೂಪಾಯಿ ಕಾಳಧನ ಸಹಿತ ಇಬ್ಬರನ್ನು ಬಂಧಿಸಲಾಗಿದೆ. ಕಾಸರಗೋಡು ತಳಂಗರೆ ಪಳ್ಳಿಕ್ಕಾಲ್ನ ಪಿ.ಎ. ಬಿಲಾಲ್ (೪೦), ಬಾಡೂರು ಕಂದಲ್ ದರ್ಹಾ ಹೌಸ್ನ ಅಬ್ದುಲ್ ರಹ್ಮಾನ್ ಡಿ (೪೭) ಎಂಬಿವರನ್ನು ನಗರಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಪಿ. ಅಜಿತ್ ಕುಮಾರ್ ಹಾಗೂ ತಂಡ ಇಂದು ಬೆಳಿಗ್ಗೆ ಬಂಧಿಸಿದೆ. ಅಬ್ದುಲ್ ರಹ್ಮಾನ್ನನ್ನು ನೆಲ್ಲಿಕುಂಜೆ ರಸ್ತೆಯ ಗೀತಾ ಟಾಕೀಸ್ ಜಂಕ್ಷನ್ ಮುಂಭಾಗ ದಿಂದ ಬಂಧಿಸಲಾಗಿದೆ. ಯಾರಿಗೋ ನೀಡಲೆಂದು ಕೈಯಲ್ಲಿ ಇರಿಸಿಕೊಂಡಿದ್ದ ೩,೦೮,೦೦೦ ರೂಪಾಯಿಗಳನ್ನು ಈತನಿಂದ ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪಳ್ಳಿಕ್ಕಾಲ್ನ ಬಿಲಾಲ್ನನ್ನು ತಾಯಲಂಗಾಡಿಯ ಒಂದು ಎಟಿಎಂನ ಸಮೀಪದಿಂದ ೪ ಲಕ್ಷ ರೂಪಾಯಿ ಸಹಿತ ಇನ್ಸ್ಪೆಕ್ಟರ್ ಹಾಗೂ ತಂಡ ಬಂಧಿಸಿದೆ. ಈತನ ಕೈಯಲ್ಲಿ ೬ ಲಕ್ಷ ರೂಪಾಯಿ ಇದ್ದುದಾಗಿಯೂ, ೨ ಲಕ್ಷರೂಪಾಯಿಯನ್ನು ಯಾರದೋ ಖಾತೆಗೆ ಠೇವಣಿ ಇರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ತನಿಖೆ ಮುಂದುವರಿಯುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ.