ತಿಂಗಳ ಹಿಂದೆ ಕೊಲ್ಲಿಯಿಂದ ತಲುಪಿದ್ದ ಯುವಕ ರೈಲಿನಡಿಗೆ ಹಾರಿ ಆತ್ಮಹತ್ಯೆ
ಕಾಸರಗೋಡು: ಒಂದು ತಿಂಗಳ ಹಿಂದೆ ಕೊಲ್ಲಿಯಿಂದ ಊರಿಗೆ ತಲುಪಿದ ಯುವಕ ರೈಲಿನ ಮುಂದೆ ಹಾರಿ ಆತ್ಮಹತ್ಯೆಗೈದನು. ಕಣ್ಣೂರು ಪೇರಾಲ್ ಕಾರಕುನ್ನ್ ಹೌಸ್ ನಿವಾಸಿ, ಮಾವುಂಗಲ್ ಪೇರಡ್ಕದಲ್ಲಿ ವಾಸ ಮಾಡುತ್ತಿರುವ ಜಮೀಶ್ ಫಿಲಿಪ್ (40) ಮೃತಪಟ್ಟವರು. ಇಂದು ಮುಂಜಾನೆ ಕಾಞಂಗಾಡ್ ರೈಲ್ವೇ ನಿಲ್ದಾಣದ ಸಮೀಪ ಘಟನೆ ನಡೆದಿದೆ. ಲೋಕೋ ಪೈಲೆಟ್ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಹೊಸದುರ್ಗ ಠಾಣಾ ಇನ್ಸ್ಪೆಕ್ಟರ್ ಪಿ. ಅಜಿತ್ ಕುಮಾರ್ರ ನೇತೃತ್ವದಲ್ಲಿ ಪೊಲೀಸರು ಸ್ಥಳಕ್ಕೆ ತಲುಪಿದರು. ಮೃತದೇಹವು ಎರಡು ತುಂಡಾಗಿ ಪತ್ತೆಯಾಗಿದೆ. ಜಮೀಶ್ ಫಿಲಿಪ್ ಆತ್ಮಹತ್ಯೆಗೈಯ್ಯಲು ಕಾರಣವೇನೆಂದು ಸ್ಪಷ್ಟವಾಗಿಲ್ಲ.
ರಾತ್ರಿ ೯.೩೦ರವರೆಗೆ ಸ್ಥಳೀಯರು ಈತನನ್ನು ಕಂಡಿದ್ದರು. ಆ ಬಳಿಕ ಕಾಞಂಗಾಡ್ಗೆ ತೆರಳಿರಬೇಕೆಂದು ಶಂಕಿಸಲಾಗಿದೆ. ಮೃತದೇಹದಿಂದ ಲಭಿಸಿದ ಆಧಾರ್ ಕಾರ್ಡ್ನಿಂದಾಗಿ ಮೃತಪಟ್ಟ ವ್ಯಕ್ತಿಯ ಗುರುತು ಪತ್ತೆಹಚ್ಚಲಾಗಿದೆ. ಮೃತದೇಹವನ್ನು ಶವಾಗಾರದಲ್ಲಿರಿಸಲಾಗಿದ್ದು, ಹೊಸದುರ್ಗ ಪೊಲೀಸರು ಕೇಸು ದಾಖಲಿಸಿದ್ದಾರೆ.