ಪಟ್ಲದಲ್ಲಿ ಹೊಳೆ ನೀರಿನ ಸೆಳೆತಕ್ಕೆ ಸಿಲುಕಿ ಗಲ್ಫ್ ಉದ್ಯೋಗಿ ಯುವಕ ಸಾವು
ಕಾಸರಗೋಡು: ಮಧೂರಿಗೆ ಸಮೀಪದ ಪಟ್ಲದಲ್ಲಿ ಕಾಲು ಜಾರಿ ಹೊಳೆಗೆ ಬಿದ್ದು ನೀರಿನ ಸೆಳೆತಕ್ಕೆ ಸಿಲುಕಿ ಯುವಕ ಸಾವನ್ನಪ್ಪಿದ ಘಟನೆ ನಿನ್ನೆ ನಡೆದಿದೆ.
ಪಾಲಕುನ್ನು ರೈಲು ನಿಲ್ದಾಣ ರಸ್ತೆ ಬಳಿಯ ಫಾಲ್ಕನ್ ಟೆಕ್ಸ್ ಟೈಲ್ ಅಂಗಡಿ ಮಾಲಕ ಪಿ.ಕೆ. ಅಬ್ದುಲ್ ಅಸೀಸ್-ಅಸ್ಮಾ ದಂಪತಿ ಪುತ್ರ ಪಾಲಕುನ್ನು ಕರಿಪ್ಪೊಡಿ ನಿವಾಸಿ ಸಾದಿಕ್ (39) ಸಾವನ್ನಪ್ಪಿದ ದುರ್ದೈವಿ. ಗಲ್ಫ್ ಉದ್ಯೋಗಿಯಾ ಗಿರುವ ಸಾದಿಕ್ ಒಂದು ವಾರದ ಹಿಂದೆಯಷ್ಟೇ ಊರಿಗೆ ಬಂದಿದ್ದರು. ಇವರು ಕರಿಪ್ಪೊಡಿ ಯಲ್ಲಿ ಹೊಸ ಮನೆ ನಿರ್ಮಿಸುತ್ತಿದ್ದು ಅದರ ನಿರ್ಮಾಣ ಕೆಲಸದಲ್ಲಿ ಮಗ್ನರಾಗಿದ್ದರು. ಈ ಮಧ್ಯೆ ಅವರು ಪಟ್ಲ ಮೊಗರು ಅರಮನವಳಪ್ಪಿ ನಲ್ಲಿರುವ ಪತ್ನಿ ಫರ್ಸಾನಾರ ಮನೆಗೆ ಬಂದಿದ್ದರು. ನಿನ್ನೆ ಬೆಳಿಗ್ಗೆ ಅಲ್ಲೇ ಸಮೀಪದಲ್ಲಿರುವ ಪತ್ನಿಯ ಸಹೋದರನ ಮನೆಗೆ ಹೋಗುತ್ತಿದ್ದ ವೇಳೆ ಕಾಲು ಜಾರಿ ಪಕ್ಕದ ಹೊಳೆಗೆ ಬಿದ್ದು ನೀರಿನ ಸೆಳೆತಕ್ಕೊಳಗಾಗಿ ನಾಪತ್ತೆಯಾಗಿದ್ದರು. ಆಗ ಅವರ ಜೊತೆಗಿದ್ದ ಪತ್ನಿಯ ಸಹೋದರ ಮೊಯ್ದು (35) ಸಾಧಿಕ್ರನ್ನು ರಕ್ಷಿಸಲೆತ್ನಿಸಿದರೂ ಫಲಕಾರಿಯಾಗದೆ ಅವರೂ ಹೊಳೆಗೆ ಬಿದ್ದು ನೀರಿನ ಸೆಳೆತಕ್ಕೊಳಗಾದಾಗ ಅಲ್ಲೇ ಸಮೀಪ ವಿದ್ದ ವಿದ್ಯುತ್ ಕಂಬವನ್ನು ಹಿಡಿದು ತಮ್ಮ ಪ್ರಾಣ ಉಳಿಸಿದರು. ಸಾದಿಕ್ರ ಮೃತದೇಹ ಮಧ್ಯಾಹ್ನದ ವೇಳೆ ಅಲ್ಲೇ ಹೊಳೆ ಬದಿ ಪತ್ತೆಯಾಗಿದೆ.
ವಿದ್ಯಾನಗರ ಪೊಲೀಸರು ಸ್ಥಳಕ್ಕಾಗಮಿಸಿ ಮಹಜರು ನಡೆಸಿದ ನಂತರ ಮೃತದೇಹವನ್ನು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೊಳಪಡಿಸಲಾಯಿತು.
ಮೃತರು ಹೆತ್ತವರು, ಪತ್ನಿಯ ಹೊರತಾಗಿ ಮಕ್ಕಳಾದ ಫಾದಿಲ್ ಸೈನ್, ನಿಯಾ ಫಾತಿಮಾ, ಆಮಿನಾ, ಸಹೋದರ-ಸಹೋದರಿಯರಾದ ಸಮೀರ್, ಶಂಸುದ್ದೀನ್, ಸವಾದ್, ಸಬಾನಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಸಾದಿಕ್ರ ಅಗಲುವಿಕೆ ಮೂಲಕ ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ಪ್ರಾಣ ಳೆದುಕೊಂಡವರ ಸಂಖ್ಯೆ ಎರಡಕ್ಕೇರಿದೆ.