ಮಂಜೇಶ್ವರ ಚುನಾವಣಾ ತಕರಾರು ಪ್ರಕರಣ: ವಿಚಾರಣೆ ಮೇ 27ಕ್ಕೆ ಮುಂದೂಡಿಕೆ
ಮಂಜೇಶ್ವರ: ೨೦೨೧ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮಂಜೇಶ್ವರ ಕ್ಷೇತ್ರದಲ್ಲಿ ಸ್ಪರ್ಧಿಸಿದ ಬಿಎಸ್ಪಿ ಉಮೇದ್ವಾರ ಸುಂದರರಿಗೆ ೨.೫ ಲಕ್ಷ ರೂ. ಮತ್ತು ಮೊಬೈಲ್ ಫೋನ್ ನೀಡಿ ಆ ಮೂಲಕ ಅವರ ನಾಮಪತ್ರ ಹಿಂತೆಗೆದುಕೊಳ್ಳುವಂತೆ ಮಾಡಲಾಗಿದೆಯೆಂಬ ಆರೋಪದಂತೆ ದಾಖಲಿಸಲಾದ ಪ್ರಕರಣದ ವಿಚಾರಣೆಯನ್ನು ಕಾಸರಗೋಡು ಪ್ರಿನ್ಸಿಪಲ್ ಜಿಲ್ಲಾ ಸೆಶನ್ಸ್ ನ್ಯಾಯಾಲಯ ಮೇ 27ಕ್ಕೆ ಮುಂದೂಡಿದೆ.
೨೦೨೧ರ ಚುನಾವಣೆಯಲ್ಲಿ ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಎಡರಂಗ ಉಮೇದ್ವಾರರಾಗಿ ಸ್ಪರ್ಧಿಸಿದ್ದ ವಿ.ವಿ. ರಮೇಶ್ ನೀಡಿದ ದೂರಿನಂತೆ ಮೊದಲು ಬದಿಯಡ್ಕ ಪೊಲೀಸರು ಈ ವಿಚಾರಣೆಯನ್ನು ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದರು. ನಂತರ ಈ ಪ್ರಕರಣದ ತನಿಖೆಯನ್ನು ಕ್ರೈಂ ಬ್ರಾಂಚ್ ವಿಭಾಗಕ್ಕೆ ಹಸ್ತಾಂತರಿಸಲಾಗಿತ್ತು. ಬಿಜೆಪಿ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ರನ್ನು ಪ್ರಧಾನ ಆರೋಪಿಯನ್ನಾಗಿಯೂ, ಬಾಲಕೃಷ್ಣ ಶಟ್ಟಿ, ಸುನಿಲ್ ನಾಕ್, ಕೆ. ಮಣಿಕಂಠ ರೈ, ವೈ. ಸುರೇಶ್ ಮತ್ತು ಲೋಕೇಶ್ ನೋಂಡಾರನ್ನು ಇತರ ಆರೋಪಿಗಳನ್ನಾಗಿಸಿ ಈ ಪ್ರಕರಣದಲ್ಲಿ ಹೆಸರಿಸಲಾಗಿದೆ. ಆದರೆ ಇದೊಂದು ಕಪೋಲ ಕಲ್ಪಿತ ಪ್ರಕರಣವಾಗಿದೆಯೆಂದೂ ಆದ್ದರಿಂದ ನಿರಪರಾಧಿಗಳಾದ ನಮ್ಮನ್ನು ಈ ಪ್ರಕರಣದಿಂದ ಹೊರತುಪಡಿಸಬೇಕು ಮಾತ್ರವಲ್ಲ ಆ ಪ್ರಕರಣವನ್ನು ರದ್ದುಪಡಿಸಬೇ ಕೆಂದು ಕೋರಿ ಆರೋಪಿಗಳು ಬಳಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿ ಮೇಲಿನ ವಿಚಾರಣೆಯನ್ನು ನ್ಯಾಯಾಲಯ ಈಗ ಮೇ ೨೭ಕ್ಕೆ ಮುಂದೂಡಿದೆ.