ರಾಜ್ಯದಲ್ಲಿ ಮತ್ತೆ ಕಾಲರಾ ಭೀತಿ : ಆಲಪ್ಪುಳದಲ್ಲಿ ಚಿಕಿತ್ಸೆಯಲ್ಲಿದ್ದ ವ್ಯಕ್ತಿ ಮೃತ್ಯು
ಆಲಪ್ಪುಳ: ರಾಜ್ಯದಲ್ಲಿ ಕಾಲರಾ ಬಾಧಿಸಿ ಚಿಕಿತ್ಸೆಯಲ್ಲಿದ್ದ ಇನ್ನೋರ್ವ ವ್ಯಕ್ತಿ ಮೃತಪಟ್ಟರು. ತಿರುವಲ್ಲದ ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆಯಲ್ಲಿದ್ದ ಆಲಪ್ಪುಳ ತಲವಡಿ ಎಂಬಲ್ಲಿನ ಟಿ.ಜಿ. ರಘು (48) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದ ರಘುವಿಗೆ ರೋಗ ಯಾರಿಂದ ಹರಡಿದೆ ಎಂದು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಅಸೌಖ್ಯ ಬಾಧಿಸಿ ಚಿಕಿತ್ಸೆಗೆ ತಲುಪಿದ ಇವರ ರಕ್ತ ತಪಾಸಣೆ ನಡೆಸಿದಾಗ ಇವರಿಗೆ ಕಾಲರಾ ಬಾಧಿಸಿರುವುದು ತಿಳಿದು ಬಂದಿತ್ತು.
ಮಲ ತಪಾಸಣೆಯ ಫಲಿತಾಂಶ ಲಭಿಸಿದ ಬಳಿಕವೇ ರೋಗದ ಕುರಿತು ನಿರ್ಧಾರ ಕೈಗೊಳ್ಳಲು ಸಾಧ್ಯವಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಈ ಫಲಿತಾಂಶ ಇಂದು ಲಭಿಸಲಿದೆ. ಈ ಮಧ್ಯೆ ಅಸೌಖ್ಯ ಉಲ್ಬಣಗೊಂಡ ರಘು ಅವರನ್ನು ತಿಲುವಲ್ಲದ ಆಸ್ಪತ್ರೆಗೆ ತಲುಪಿಸುತ್ತಿದ್ದಂತೆ ಆರೋಗ್ಯಸ್ಥಿತಿ ಹದಗೆಟ್ಟಿತ್ತು. ಇತರ ಆರೋಗ್ಯ ಸಮಸ್ಯೆಗಳು ಇದ್ದುದರಿಂದ ಇವರನ್ನು ವೆಂಟಿಲೇಟರ್ನಲ್ಲಿ ದಾಖಲಿಸಲಾಗಿದ್ದು, ಇಂದು ಮುಂಜಾನೆ ವೇಳೆ ನಿಧನ ಸಂಭವಿಸಿದೆ. ಮೃತರು ಪತ್ನಿ ರಾಜಿ, ಪುತ್ರಿ ಶಿವಪಾರ್ವತಿ ಎಂಬಿವರನ್ನು ಅಗಲಿದ್ದಾರೆ. ರಾಜ್ಯದಲ್ಲಿ ಕಾಲರಾ ಬಾಧಿಸಿ ಸಾವಿಗೀಡಾಗುವವರ ಸಂಖ್ಯೆ ಎರಡಕ್ಕೇರಿದೆ. ಈ ಹಿನ್ನೆಲೆಯಲ್ಲಿ ರೋಗ ಕಂಡು ಬಂದ ಪ್ರದೇಶದಲ್ಲಿ ಆರೋಗ್ಯ ಇಲಾಖೆ ಜಾಗ್ರತಾ ನಿರ್ದೇಶ ಹೊರಡಿಸಿದೆ. ತಿರುವನಂತಪುರ ಕವಡಿಯಾರ್ ನಿವಾಸಿಯಾದ ೬೩ರ ಹರೆಯದ ವ್ಯಕ್ತಿ ಈ ಹಿಂದೆ ಮೃತಪಟ್ಟಿದ್ದರು. ಎಪ್ರಿಲ್ ೧೭ರಂದು ಇವರನ್ನು ಜ್ವರ ಬಾಧಿಸಿದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ೨೨ರಂದು ಅವರು ಮೃತಪಟ್ಟಿದ್ದರು.