ಸ್ಥಳೀಯಾಡಳಿತ ಸಂಸ್ಥೆಯನ್ನು ಆರ್ಥಿಕ ಸಂದಿಗ್ಧತೆಯಲ್ಲಿ ಸಿಲುಕಿಸುವ ಸರಕಾರದ ಕ್ರಮದ ವಿರುದ್ಧ ರಾಜ್ಯ ವ್ಯಾಪಕ ಸಹಿಗೋಡೆ ಪ್ರತಿಭಟನೆ

ಕಾಸರಗೋಡು: ಸ್ಥಳೀಯಾ ಡಳಿತ ಸಂಸ್ಥೆಗಳನ್ನು ಕೇವಲ ನೋಟಕ ವಸ್ತುವನ್ನಾಗಿಸುವ ಸರಕಾರದ ನಿಲುವನ್ನು ಪ್ರತಿಭಟಿಸಿ ಎಲ್.ಜಿ.ಎಂ.ಎಲ್ ರಾಜ್ಯ ವ್ಯಾಪಕವಾಗಿ ನಿನ್ನೆ ಪಂಚಾಯತ್ ಕಚೇರಿಗಳ ಮುಂದೆ ಸಹಿ ಗೋಡೆ ನಿರ್ಮಿಸಿತು. 2023-24 ವರ್ಷದ ಮೈಂಟನೆನ್ಸ್ ಗ್ರಾಂಟ್ ಆದ 1215 ಕೋಟಿ ರೂಪಾಯಿ ಹಾಗೂ ಜನರಲ್ ಪರ್ಪಸ್ ಗ್ರಾಂಟ್‌ನ 587 ಕೋಟಿ ರೂಪಾಯಿ ಶೀಘ್ರ ಮಂಜೂರು ಮಾಡಬೇಕು. 2024 ಮಾರ್ಚ್ 25ರ ಮುಂಚೆ ಟ್ರಷರಿಗೆ ನೀಡಿದ 1156.12 ಕೋಟಿ ರೂಪಾಯಿ ಪ್ರತ್ಯೇಕ ಮೊತ್ತವನ್ನು ಕೂಡಲೇ ನೀಡಬೇಕು. ಲೈಫ್ ಯೋಜನೆ ಫಲಾನುಭವಿ ಗಳಿಗಿರುವ ಫಂಡ್ ತಡೆಯುವ ಕ್ರಮದಿಂದ ಸರಕಾರ ಹಿಂಜರಿಯಬೇಕು. ನೀಡಲು ಬಾಕಿ ಇರುವ ಆರು ತಿಂಗಳ ಕ್ಷೇಮ ಪಿಂಚಣಿ ಕೂಡಲೇ ಮಂಜೂರು ಮಾಡಬೇಕು ಮೊದಲಾದ ಬೇಡಿಕೆಗಳನ್ನು ಮುಂದಿರಿಸಿ ಸಹಿಗೋಡೆ ಪ್ರತಿಭಟನೆ ನಡೆಸಲಾಯಿತು.

ಸ್ಥಳೀಯಾಡಳಿತ ಸಂಸ್ಥೆಗಳನ್ನು ಆರ್ಥಿಕವಾಗಿ ಸಂಕಷ್ಟಕ್ಕೆ ತಳ್ಳುವ ಸರಕಾರದ ಕ್ರಮ ರಾಜ್ಯದ ಎಲ್ಲ ಪಂಚಾಯತ್‌ಗಳನ್ನೂ ಸಂದಿಗ್ಧತೆಯಲ್ಲಿ ಸಿಲುಕಿಸುತ್ತಿದೆ ಎಂದೂ ಈ ಕ್ರಮದಿಂದ ಸರಕಾರ ಕೂಡಲೇ ಹಿಂ ಜರಿಯ ಬೇಕೆಂದು ಸಭೆ ಒತ್ತಾಯಿಸಿತು. ಇಲ್ಲದಿದ್ದಲ್ಲಿ ೨೦ರಂದು ರಾಜ್ಯ ವ್ಯಾಪಕವಾಗಿ ಕಲೆಕ್ಟರೇಟ್ ಧರಣಿ ಹಾಗೂ ಅನಂತರ ರಾಜಧಾನಿಯಲ್ಲಿ ಪ್ರತ್ಯಕ್ಷ ಚಳವಳಿ ನಡೆಸುವುದಾಗಿ ಸಭೆ ಮುನ್ನೆಚ್ಚರಿಕೆ ನೀಡಿದೆ. ವರ್ಕಾಡಿ ಪಂಚಾಯತ್ ಕಚೇರಿ ಮುಂದೆ ನಡೆದ ಸಹಿ ಗೋಡೆ ಪ್ರತಿಭಟನೆಯನ್ನು ಮಂಡಲ ಲೀಗ್ ಉಪಾಧ್ಯಕ್ಷ ಅಂದುಂಞಿ ಹಾಜಿ ಚಿಪ್ಪಾರ್ ಉದ್ಘಾಟಿಸಿದರು. ಪಂಚಾಯತ್ ಮಾಜಿ ಅಧ್ಯಕ್ಷ ಅಬ್ದುಲ್ ಮಜೀದ್, ಕೆ. ಮುಹಮ್ಮದ್, ಉಮ್ಮರ್ ಬೋರ್ಕಳ, ಹಾರೀಸ್ ಪಾವೂರು, ಸೀತಾ, ಇಬ್ರಾಹಿಂ ಧರ್ಮನಗರ, ಉಮಾವತಿ, ಶಾಂತಾ, ಹೆಲನ್ ಲೋಬೊ ಮೊದಲಾದವರು ಮಾತನಾಡಿದರು.

ಕಾಸರಗೋಡು ಬ್ಲೋಕ್ ಪಂಚಾಯತ್ ಕಚೇರಿ ಮುಂದೆ ನಡೆದ ಪ್ರತಿಭಟನೆಯನ್ನು ಜಿಲ್ಲಾ ಮುಸ್ಲಿಂ ಲೀಗ್ ಅಧ್ಯಕ್ಷ ಕಲ್ಲಟ್ರ ಮಾಹಿನ್ ಹಾಜಿ ಉದ್ಘಾ ಟಿಸಿದರು. ಎಲ್.ಜಿ.ಎಂ.ಎಲ್ ಜಿಲ್ಲಾ ಕಾರ್ಯದರ್ಶಿ ಬದರುಲ್ ಮುನೀರ್ ಅಧ್ಯಕ್ಷತೆ ವಹಿಸಿದರು. ಕಲಾಬನ್ ರಾಜು, ಹನೀಫ ಪಾರ, ಜಮೀಲಾ ಅಹಮ್ಮದ್, ಶಮೀಮಾ ಅನ್ಸಾರಿ ಮೊದಲಾದವರು ಮಾತನಾಡಿದರು. ಜಿಲ್ಲಾ ಕೋಶಾಧಿಕಾರಿ ಅಶ್ರಫ್ ಕಾರ್ಲೆ ಸ್ವಾಗತಿಸಿ, ಸಕೀನಾ ಗೋವಾ ವಂದಿಸಿದರು.

You cannot copy contents of this page