ಆರಿಕ್ಕಾಡಿ ಶ್ರೀ ಹನುಮಾನ್ ಕ್ಷೇತ್ರಕ್ಕೆ ನುಗ್ಗಿದ ಕಳ್ಳರು: ಎರಡು ಕಾಣಿಕೆ ಹುಂಡಿಗಳಿಂದ ಹಣ ಕಳವು
ಕುಂಬಳೆ: ಆರಿಕ್ಕಾಡಿ ಕೋಟೆ ಶ್ರೀ ಹನುಮಾನ್ ಕ್ಷೇತ್ರಕ್ಕೆ ಕಳ್ಳರು ನುಗ್ಗಿ ಹಣ ದೋಚಿದ ಘಟನೆ ನಡೆದಿದೆ. ಕ್ಷೇತ್ರದ ಆವರಣಗೋಡೆ ದಾಟಿ ಒಳ ನುಗ್ಗಿದ ಕಳ್ಳರು ಗರ್ಭಗುಡಿಯ ಹೊರಗಿರುವ ಕಾಣಿಕೆ ಹುಂಡಿಯ ಬೀಗ ಮುರಿದು ಅದರಲ್ಲಿದ್ದ ಹಣವನ್ನು ದೋಚಿದ್ದಾರೆ. ಅದರಲ್ಲಿ ಸುಮಾರು ೩೦,೦೦೦ ರೂಪಾಯಿಗಿಂತ ಹೆಚ್ಚು ಮೊತ್ತ ಇದ್ದಿರಬಹುದೆಂದು ಅಂದಾಜಿಸಲಾಗಿ ದೆಯೆಂದು ಕ್ಷೇತ್ರ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.
ಇದೇ ಕ್ಷೇತ್ರ ಸಮೀಪದಲ್ಲಿರುವ ಶ್ರೀ ಮಹಾಮಾಯಿ ದೇವಿಯ ಗುಡಿಯ ಕಾಣಿಕೆ ಹುಂಡಿಯಿಂ ದಲೂ ಕಳ್ಳರು ಹಣ ಕಳವುಗೈದಿದ್ದಾರೆ. ಅದರ ಬೀಗ ಮುರಿದು ಹಣ ದೋಚಿದ್ದಾರೆ. ಈ ಹುಂಡಿಯಲ್ಲಿ ಸುಮಾರು ೩ ಸಾವಿರ ರೂಪಾಯಿ ಇದ್ದಿರಬಹುದೆಂದು ಅಂದಾ ಜಿಸಲಾಗಿದೆ. ಮೊನ್ನೆ ರಾತ್ರಿ ಈ ಕಳವು ನಡೆದಿರಬಹುದೆಂದು ಸಂಶಯಿ ಸಲಾಗುತ್ತಿದೆ. ನಿನ್ನೆ ಬೆಳಿಗ್ಗೆ ಅರ್ಚಕ ಕ್ಷೇತ್ರಕ್ಕೆ ತಲುಪಿದಾಗಲೇ ಕಳವು ನಡೆದ ವಿಷಯ ಅರಿವಿಗೆ ಬಂದಿದೆ. ಕೂಡಲೇ ಅವರು ಕ್ಷೇತ್ರದ ಪದಾಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಘಟನೆ ಬಗ್ಗೆ ಕಾರ್ಯದರ್ಶಿ ಜ್ಯೋತಿಷ್ ಕುಂಬಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಶ್ರೀ ಹನುಮಾನ್ ಕ್ಷೇತ್ರದ ಅಲ್ಪವೇ ದೂರದಲ್ಲಿರುವ ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರದಲ್ಲಿ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯ ಕ್ರಮಗಳು ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಕುಂಬಳೆಯಿಂದ ಆರಿಕ್ಕಾಡಿವರೆಗೆ ಲೈಟಿಂಗ್ಸ್ ಸ್ಥಾಪಿಸ ಲಾಗಿದೆ. ಅಲ್ಲದೆ ದಿನಪೂರ್ತಿ ಸಾವಿರಾರು ವಾಹನಗಳು ಸಂಚರಿಸುವ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲೇ ಶ್ರೀ ಹನುಮಾನ್ ಕ್ಷೇತ್ರವಿದೆ. ನಿತ್ಯ ಜನಸಂಚಾರವುಳ್ಳ ಪ್ರದೇಶದಲ್ಲಿರುವ ಕ್ಷೇತ್ರದಿಂದ ಕಳವು ನಡೆದಿರುವುದು ಜನತೆಯಲ್ಲಿ ಆತಂಕ ಹೆಚ್ಚಿಸಿದೆ.
ಕಳೆದ ಕೆಲವು ತಿಂಗಳಿಂದ ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಲವು ಕಳವು ಪ್ರಕರಣಗಳು ನಡೆದಿದ್ದು, ಆದರೆ ಈ ಸಂಬಂಧ ಯಾವುದೇ ಪ್ರಕರಣವನ್ನು ಭೇದಿಸಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಪದೇ ಪದೇ ಕಳವು ನಡೆಯುತ್ತಿರುವುದು ನಾಗರಿಕರಲ್ಲಿ ತೀವ್ರ ಆತಂಕ ಮೂಡಿಸಿದೆ.