ಎಂಡೋಸಲ್ಫಾನ್ ಬಾವಿಗೆ ಸುರಿದು ಮುಚ್ಚಿದ ಪ್ರಕರಣ: ಕೇಂದ್ರ ತಂಡ ಮಿಂಚಿಪದವಿಗೆ ತಲುಪಿ ಪರಿಶೀಲನೆ
ಮುಳ್ಳೇರಿಯ: ಪ್ಲಾಂಟೇಶನ್ ಕಾರ್ಪೋರೇಶನ್ ಕೇರಳ (ಪಿಸಿಕೆ) ಇದರ ಗೋಡೌನ್ನಲ್ಲಿ ಬಾಕಿ ಉಳಿದಿದ್ದ ಎಂಡೋಸಲ್ಫಾನ್ ಕೀಟ ನಾಶಕವನ್ನು ಪಾಳು ಬಾವಿಯಲ್ಲಿ ತುಂಬಿಸಿ ಮುಚ್ಚಿಡಲಾಗಿದೆಯೆಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ತಂಡ ನಿನ್ನೆ ಮಿಂಚಿಪದವಿಗೆ ತಲುಪಿ ಸ್ಥಳ ಪರಿಶೀಲನೆ ನಡೆಸಿದೆ. ಕೇಂದ್ರ ಮಲಿನೀಕರಣ ನಿಯಂತ್ರಣ ಮಂಡಳಿ ದಕ್ಷಿಣವಲಯ (ಬೆಂಗಳೂರು) ರೀಜಿನಲ್ ಡೈರೆಕ್ಟರ್ ಡಾ. ಜಿ. ಚಂದ್ರಬಾಬು ಅವರ ನೇತೃತ್ವದ ತಂಡ ಮಿಂಚಿಪದವಿಗೆ ತಲುಪಿದ್ದು ಅಲ್ಲಿನ ಮಣ್ಣು, ನೀರಿನ ಸ್ಯಾಂಪಲ್ ಸಂಗ್ರಹಿಸಿ ತಪಾಸಣೆಗಾಗಿ ಕಂಡೊಯ್ದಿದೆ. ಪ್ಲಾಂಟೇಶನ್ ಕಾರ್ಪೋರೇಶನ್ನ ಅಧಿಕಾರಿಗಳಿಂದ ಹಾಗೂ ನಾಗರಿಕ ರಿಂದ ಮಾಹಿತಿ ಸಂಗ್ರಹಿಸಲಾಗಿದೆ.
ಮಿಂಚಿಪದವಿನಲ್ಲಿರುವ ಪಿ.ಸಿ.ಕೆ ಹಿತ್ತಿಲಿನ ಬಾವಿಯ ನೀರು, ಎಂಡೋ ಸಲ್ಫಾನ್ ಕೀಟನಾಶಕವನ್ನು ಮಿಶ್ರಣಗೊಳಿ ಸಿದ ಸ್ಥಳದ ಮಣ್ಣು ಸಂಗ್ರಹಿಸಲಾಗಿದೆ. ಬಳಿಕ ಎಂಡೋಸಲ್ಫಾನ್ ಹೂತು ಹಾಕಿದ ಬಾವಿ ಇದ್ದ ಸ್ಥಳಕ್ಕೆ ತಜ್ಞರು ತಲುಪಿ ಅಲ್ಲಿನ ಮಣ್ಣಿನ ಸ್ಯಾಂಪಲ್ ಸಂಗ್ರಹಿಸಿದ್ದಾರೆ. ಅನಂತರ ಬೆಳ್ಳೂರು ಕುಟುಂಬ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ತಂಡ ಎಂಡೋಸಲ್ಫಾನ್ ಸಂತ್ರಸ್ತರ ಆರೋಗ್ಯ ಸ್ಥಿತಿಯ ಕುರಿತು ಅವಲೋಕನ ನಡೆಸಿತು.
ಎಂಡೋಸಲ್ಫಾನ್ ವಿರುದ್ಧ ಮುಷ್ಕರ ಸಮಿತಿ ಕಾರ್ಯಕರ್ತರೂ ಸ್ಥಳಕ್ಕೆ ತಲುಪಿದ್ದು, ಅವರೊಂದಿಗೂ ತಜ್ಞರತಂಡ ಮಾಹಿತಿ ಸಂಗ್ರಹಿಸಿದೆ. ಮಿಂಚಿಪದವಿನಲ್ಲಿ ಪರಿಶೀಲನೆಯಲ್ಲಿ ಸಂಗ್ರಹಿಸಿದ ಪ್ರಾಥಮಿಕ ವರದಿಯನ್ನು ಜನವರಿ ೨ರಂದು ನಡೆಯುವ ರಾಷ್ಟ್ರೀಯ ಹಸಿರು ಟ್ರಿಬ್ಯೂನಲ್ನ ಹಿಯರಿಂಗ್ಗೆ ಸಲ್ಲಿಸಲಾಗುವುದು. ಮಣ್ಣು ಹಾಗೂ ನೀರಿನ ವೈಜ್ಞಾನಿಕ ತಪಾಸಣೆ ವರದಿ ಲಭಿಸಲು ವಿಳಂಬವಾಗಲಿದೆ ಯೆನ್ನಲಾಗಿದೆ. ಎಂಡೋಸಲ್ಫಾನ್ ಕೀಟನಾಶಕವನ್ನು ಕಾರಡ್ಕ ಪಂಚಾ ಯತ್ನ ಮಿಂಚಿಪದವಿನ ಪಾಳು ಬಾವಿಗೆ ಸುರಿದ ಘಟನೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಉಡುಪಿ ಕೇಂದ್ರವಾಗಿರುವ ಹ್ಯೂಮನ್ ರೈಟ್ಸ್ ಪ್ರೊಟೆಕ್ಷನ್ ಫೌಂಡೇಶನ್ ಅಧ್ಯಕ್ಷ ರವೀಂದ್ರನಾಥ ಶ್ಯಾನುಭೋಗ್ ಎಂಬವರು ರಾಷ್ಟ್ರೀಯ ಹಸಿರು ಟ್ರಿಬ್ಯೂನಲ್ ಚೆನ್ನೈ ಪೀಠವನ್ನು ಸಮೀಪಿಸಿದ್ದರು. ಇದರಂತೆ ರಾಷ್ಟ್ರೀಯ ಹಸಿರು ಟ್ರಿಬ್ಯೂನಲ್ ಕೇರಳ, ಕರ್ನಾಟಕ ಸರಕಾರಗಳಿಗೆ ಕೇಂದ್ರ, ರಾಜ್ಯ ಮಲಿನೀ ಕರಣ ನಿಯಂತ್ರಣ ಮಂಡಳಿಗೆ ಹಾಗೂ ಪ್ಲಾಂಟೇಶನ್ ಕಾರ್ಪೋರೇಶನ್ ಕೇರಳಕ್ಕೆ ನೋಟೀಸು ಕಳುಹಿಸಿತ್ತು. ಇದರ ಮುಂದಿನ ಕ್ರಮದ ಭಾಗವಾಗಿ ಕೇಂದ್ರತಂಡ ಮಿಂಚಿಪದವಿಗೆ ತಲುಪಿದೆ.