ಏಣಿಯರ್ಪು ಲೈಫ್ ಯೋಜನೆ: ಮೂಲಭೂತ ಸೌಕರ್ಯಗಳಿಗಾಗಿ ಪ್ರತ್ಯೇಕ ಯೋಜನೆ ಜ್ಯಾರಿಗೊಳಿಸಲು ಒತ್ತಾಯಿಸಿ ಸಿಪಿಎಂನಿಂದ ಸಚಿವರಿಗೆ ಮನವಿ
ನೀರ್ಚಾಲು: ಬದಿಯಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಏಣಿಯರ್ಪು ನಲ್ಲಿ ಲೈಫ್ ಯೋಜನೆಯಲ್ಲಿ ಮನೆ ಲಭಿಸಿದ ಸ್ಥಳದಲ್ಲಿ ಪ್ರತ್ಯೇಕ ಪ್ಯಾಕೇಜ್ ಬೇಕೆಂಬ ಬೇಡಿಕೆ ತೀವ್ರಗೊಂಡಿದೆ. ಈ ಬೇಡಿಕೆ ಮುಂದಿರಿಸಿ ಸಿಪಿಎಂ ಲೋಕಲ್ ಕಮಿಟಿ ಸ್ಥಳೀಯಾಡಳಿತ ಖಾತೆ ಸಚಿವರಿಗೆ ಮನವಿ ಸಲ್ಲಿಸಿದೆ.
ಸರಕಾರ ಸ್ಥಳ ಹಾಗೂ ಮನೆ ನೀಡಿದ ೪೮ ಕುಟುಂಬಗಳು ವಾಸಿಸುವ ಏಣಿಯರ್ಪಿನಲ್ಲಿ ಶುದ್ಧ ನೀರು, ರಸ್ತೆ ಸಹಿತ ಮೂಲಭೂತ ಸೌಕರ್ಯಗಳು, ಇತರ ಮೂಲಭೂತ ಸೌಕರ್ಯಗಳಿಲ್ಲ. ಆದುದರಿಂದ ಈ ಎಲ್ಲಾ ಸೌಕರ್ಯಗಳನ್ನು ಒದಗಿಸಿ ಕೊಡಬೇಕೆಂದು ಮನವಿಯಲ್ಲಿ ವಿನಂತಿಸಲಾಗಿದೆ.
ತಲಾ3 ಸೆಂಟ್ನಂತೆ 14 ಎಕರೆ ಸ್ಥಳದಲ್ಲಿ 321 ಮಂದಿಗೆ ಸರಕಾರ ಒದಗಿಸಿ ಅವರಿಗೆ ಪಟ್ಟಾ ನೀಡಿದೆ. ನಿರ್ಮಾಣ ಹಂತದಲ್ಲಿ ಹಾಗೂ ನಿರ್ಮಾಣ ಪೂರ್ಣಗೊಂಡ 82 ಮನೆಗಳಿವೆ. ಈ ಪೈಕಿ 48ಮನೆಗಳಲ್ಲಿ ಜನವಾಸವಿದೆ. ಇನ್ನು ಉಳಿದಿರುವ ಸ್ಥಳದ ಕುರಿತು ಪರಿಶೀಲನೆ ನಡೆಸಿ ಅರ್ಹರಿಗೆ ಮನೆ ದೊರಕಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.
ಇದೀಗ ಕುಟುಂಬಗಳು ವಾಸ ಆರಂಭಿಸಿದ ೪೮ ಮನೆಗಳಲ್ಲಾಗಿ 252 ಮಂದಿಯಿದ್ದಾರೆ. ಇವರಲ್ಲಿ ಹೆಚ್ಚಿನವರು ಮಹಿಳೆಯರು ಹಾಗೂ ಮಕ್ಕಳಾಗಿದ್ದಾರೆ. ಈ ಮನೆಗಳಿಗೆ ಆವರಣಗೋಡೆ ನಿರ್ಮಿಸಬೇಕು, ವಿದ್ಯುತ್ ಸೌಕರ್ಯಕ್ಕಾಗಿ ಟ್ರಾನ್ಸ್ಫಾರ್ಮರ್ ಸ್ಥಾಪಿಸಬೇಕು, ಹೈಮಾಸ್ಟ್ ಲೈಟ್, ಮಿನಿ ಸ್ಟೇಡಿಯಂ, ಅಂಗನವಾಡಿ, ಗ್ರಂಥಾಲಯ ಮೊದಲಾದ ಸೌಕರ್ಯಗಳನ್ನು ಇಲ್ಲಿ ಏರ್ಪಡಿಸಬೇಕೆಂದು ಸಿಪಿಎಂ ನೀರ್ಚಾಲು ಲೋಕಲ್ ಸೆಕ್ರೆಟರಿ ಸುಬೈರ್ ಬಾಪಾಲಿಪೊನ ಇತ್ತೀಚೆಗೆ ಸಚಿವ ಎಂ.ಬಿ. ರಾಜೇಶ್ರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.