ಜೋಡುಕಲ್ಲು: ಸೇವಾ ನಿಧಿಯ ಕಾಣಿಕೆಹುಂಡಿ ಕಳವುಗೈದು ಮನೆ ಜಗಲಿಯಲ್ಲಿ ಉಪೇಕ್ಷಿಸಿದ ಸ್ಥಿತಿಯಲ್ಲಿ ಪತ್ತೆ

ಉಪ್ಪಳ: ಸೇವಾ ಭಾರತಿ ಜೋಡುಕಲ್ಲು ಇದರ ಕೇಶವ ಶಿಶು ಮಂದಿರದಿಂದ ಸೇವಾ ನಿಧಿಯ ಕಾಣಿಕೆ ಹುಂಡಿಯನ್ನು ಹಾಡಹಗಲೇ ಕಳವುಗೈದು ಪರಿಸರದ ಮನೆಯೊಂದರ ಜಗಲಿಯಲ್ಲಿ ಉಪೇಕ್ಷಿಸಿದ ಘಟನೆ ನಡೆದಿದೆ. ನಿನ್ನೆ ಮಧ್ಯಾಹ್ನ 2 ಗಂಟೆಯಿಂದ 5 ಗಂಟೆ ಮಧ್ಯೆ ಕಳವು ನಡೆದಿರುವುದಾಗಿ ತಿಳಿದುಬಂದಿದೆ. ಸಂಜೆ ಪರಿಸರದ ಮನೆಯ ಜಗಲಿಯಲ್ಲಿ ಕಾಣಿಕೆ ಹುಂಡಿಯೊಂದು ಪತ್ತೆಯಾಗಿತ್ತು.  ಈ ಬಗ್ಗೆ ಮನೆಯವರು ಶಿಶು ಮಂದಿರದ ಸಮಿತಿ ಪದಾಧಿಕಾರಿಗಳಿಗೆ ತಿಳಿಸಿದ್ದರು. ಪದಾಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಶಿಶು ಮಂದಿರದ ಕಾಣಿಕೆ ಹುಂಡಿಯೆಂದು ತಿಳಿದುಬಂದಿದೆ. ಕೂಡಲೇ ಶಿಶು ಮಂದಿರಕ್ಕೆ ತೆರಳಿ ನೋಡಿದಾಗ ಎದುರು ಬಾಗಿಲಿನ ಬೀಗ ಒಡೆದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಳ್ಳರು ಹಣವಿದ್ದ ಕಾಣಿಕೆ ಹುಂಡಿಯನ್ನು ಕಳವುಗೈದು ಅದರ ಬೀಗವನ್ನು ಮುರಿಯಲು ಸಾಧ್ಯವಾಗದೆ ಮನೆಯ ಜಗಲಿಯಲ್ಲಿ ಎಸೆದು ಹೋಗಿ ದ್ದಾರೆಂದು ಅಂದಾಜಿಸಲಾಗಿದೆ. ಈ ಬಗ್ಗೆ ಶಿಶು ಮಂದಿರದ ಸಮಿತಿ ಕಾರ್ಯದರ್ಶಿ ಲೋಕೇಶ ನೋಂಡಾ ನೀಡಿದ ಮಾಹಿತಿಯಂತೆ ಮಂಜೇಶ್ವರ ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆ ನಡೆಸಿದ್ದಾರೆ. ಕಳವಿನ ಬಗ್ಗೆ ಮಾಹಿತಿ ತಿಳಿದು ಸಮಿತಿ ಅಧ್ಯಕ್ಷ ದಾಮೋದರ ಉಬರ್ಲೆ ಸಹಿತ ಇತರ ಪದಾಧಿಕಾರಿಗಳು, ಊರವರು ತಲುಪಿದ್ದಾರೆ.

Leave a Reply

Your email address will not be published. Required fields are marked *

You cannot copy content of this page