ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಕೆರೆಯಲ್ಲಿ ಪತ್ತೆ

ಉಪ್ಪಳ: ನಾಪತ್ತೆಯಾದ ವ್ಯಕ್ತಿಯೊಬ್ಬರು ತೋಟದ ಕೆರೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಮೂಲತಃ ವರ್ಕಾಡಿ ಕೂಟತ್ತಜೆ ನಿವಾಸಿಯೂ ಪ್ರಸ್ತುತ ಮಂಗಳೂರು ಕಂಕನಾಡಿಯ ವೆಲೆನ್ಸಿಯದಲ್ಲಿ ವಾಸಿಸುತ್ತಿದ್ದ ಆನಂದ ಜೋಗಿ (೬೯) ಎಂಬವರು ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಇವರು ಮೀನುಗಾರಿಕಾ ಇಲಾಖೆಯ ನಿವೃತ್ತ ಉದ್ಯೋಗಿಯಾಗಿದ್ದರು. ಮೊನ್ನೆ ಇವರು ಮನೆಯಿಂದ ಹೊರಗೆ ತೆರಳಿದ್ದರು. ಆದರೆ ಮರಳಿ ಬಾರದ ಹಿನ್ನೆಲೆಯಲ್ಲಿ ಮನೆಯವರು ಕೂಟತ್ತಜೆಯಲ್ಲಿರುವ ಸಂಬಂಧಿಕರಿಗೆ ವಿಷಯ ತಿಳಿಸಿದ್ದಾರೆ. ಇದರಂತೆ ಸಂಬಂಧಿಕರು ಹುಡುಕಾಡುತ್ತಿದ್ದಂತೆ ನಿನ್ನೆ ಸಂಜೆ ಕೂಟತ್ತಜೆಯಲ್ಲಿ ವ್ಯಕ್ತಿಯೊಬ್ಬರ ತೋಟದ ಕೆರೆಯಲ್ಲಿ ಆನಂದ ಜೋಗಿಯ ಮೃತದೇಹ ಪತ್ತೆಯಾಗಿದೆ. ಬಳಿಕ ಮಂಜೇಶ್ವರ ಪೊಲೀಸರು ಹಾಗೂ ಉಪ್ಪಳದ ಅಗ್ನಿಶಾಮಕದಳ ತಲುಪಿ ಮೃತದೇಹವನ್ನು ಮೇಲಕ್ಕೆತ್ತಲಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಮಂಗಲ್ಪಾಡಿ ಸರಕಾರಿ ಆಸ್ಪತ್ರೆಗೆ ತಲುಪಿಸಲಾಗಿದೆ.

ಮೃತರು ಪತ್ನಿ ವಸಂತಿ, ಮಕ್ಕಳಾದ ದೀಪಿಕ, ರೂಪಿಕ, ಅಳಿಯ ಮಧುಕರ, ಸಹೋದರ-ಸಹೋದರಿಯರ ಸಹಿತ  ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page