ಬೈಕ್ ಮಗುಚಿಬಿದ್ದು ನವವರ ಮೃತ್ಯು

ಕಾಸರಗೋಡು: ಬೈಕ್ ನಿಯಂತ್ರಣ ತಪ್ಪಿ ಮಗುಚಿಬಿದ್ದು ನವವರ ದಾರುಣವಾಗಿ ಸಾವನ್ನಪ್ಪಿದ  ಘಟನೆ ನಡೆದಿದೆ.

ಮೇಲ್ಪರಂಬ ಚಳಿಯಂಗೋಡಿನ ಸಾಲಿಹ್-ಆಚಿಬಿ ದಂಪತಿ ಪುತ್ರ ಅಬೂಬಕರ್ ಸಿದ್ದಿಕ್ (28) ಸಾವನ್ನಪ್ಪಿದ ದುರ್ದೈವಿ ಯುವಕ. ಅಬೂಬಕರ್ ಸಿದ್ದಿಕ್‌ರ ವಿವಾಹ 40 ದಿನಗಳ ಹಿಂದೆಯಷ್ಟೇ ಪಡನ್ನ ಎಡಚ್ಚಾಕೈ ಅಳಿಕ್ಕಲ್ ಕೋಕಾಕಡವಿನ ಟಿ.ಕೆ. ಮುಹಮ್ಮದ್ ಎಂಬವರ ಪುತ್ರಿ ಫಾತಿಮಾಳ ಜತೆ ನಡೆದಿತ್ತು. ಅವರು ತನ್ನ ಪತ್ನಿ ಜತೆಗೆ ಪಡನ್ನದಲ್ಲಿರುವ ಮಾವನ  ಮನೆಗೆ ಹೋಗಿ ಅಲ್ಲಿ ಆಕೆಯನ್ನು ಬಿಟ್ಟು ಬೈಕ್‌ನಲ್ಲಿ  ಮನೆಗೆ ಹಿಂತಿರುಗುತ್ತಿದ್ದ ದಾರಿ ಮಧ್ಯೆ ಕಳನಾಡು ರೈಲು ನಿಲ್ದಾಣ ಸಮೀಪದ ಮೇಲ್ಪರಂಬ  ಕ್ಲಬ್ ಬಳಿಯ ಹೊಸದುರ್ಗ-ಕಾಸರಗೋಡು ರಾಜ್ಯ ಹೆದ್ದಾರಿಯಲ್ಲಿ ನಿನ್ನೆ ಮುಂಜಾನೆ ಬೈಕ್ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ. ಆ ವೇಳೆ ಅಲ್ಲಿ ಯಾರೂ ಇರಲಿಲ್ಲ. ನಿನ್ನೆ ಮುಂಜಾನೆ ೪.೩೦ಕ್ಕೆ  ವಿತರಣೆಗಾರನೋರ್ವ ರಸ್ತೆಯಲ್ಲಿ ಬೈಕ್ ಮತ್ತು ಯುವಕ ಬಿದ್ದಿರುವುದನ್ನು ಕಂಡು ತಕ್ಷಣ ಮೇಲ್ಪರಂಬ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ತಕ್ಷಣ ಅಲ್ಲಿಗೆ ಆಗಮಿಸಿ, ಗಾಯಾಳು ಅಬೂಬಕರ್ ಸಿದ್ದಿಕ್‌ರನ್ನು ಜನರಲ್ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಅದರ ಮೊದಲೇ ಅಬೂಬಕರ್ ಸಿದ್ದಿಕ್‌ರ ಪ್ರಾಣಪಕ್ಷಿ ಹಾರಿಹೋಗಿತ್ತು. ಇವರು ಮುಂದಿನ ವಾರ  ವಿದೇಶಕ್ಕೆ ಹೋಗುವ ಸಿದ್ಧತೆಯಲ್ಲಿ ತೊಡಗಿದ್ದರು.  ಮೃತರು ಹೆತ್ತವರು, ಪತ್ನಿಯ ಹೊರತಾಗಿ ಸಹೋದರ ಅಫ್ರೀದಿ ಹಾಗೂ ಅಪಾರ ಬಂಧು-ಮಿತ್ರರರನ್ನು ಅಗಲಿದ್ದಾರೆ

Leave a Reply

Your email address will not be published. Required fields are marked *

You cannot copy content of this page