ಶಾಸಕ ಇ. ಚಂದ್ರಶೇಖರನ್ ವಿರುದ್ಧ ಫೇಸ್‌ಬುಕ್ ಪೋಸ್ಟ್: ಡೆಪ್ಯುಟಿ ತಹಶೀಲ್ದಾರ್ ಅಮಾನತು

ಕಾಸರಗೋಡು: ಮಾಜಿ ಸಚಿವ ಕಾಞಂಗಾಡ್ ಶಾಸಕ ಇ. ಚಂದ್ರಶೇಖರನ್ ವಿರುದ್ಧ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ ಡೆಪ್ಯುಟಿ ತಹಶೀಲ್ದಾರ್‌ರನ್ನು ಅಮಾನತು ಮಾಡಲಾಗಿದೆ. ವೆಳ್ಳೆರಿಕುಂಡ್ ತಾಲೂಕಿನ ಡೆಪ್ಯುಟಿ ತಹಶೀಲ್ದಾರ್ ಕಾಞಂಗಾಡ್ ನಿವಾಸಿ ಎ. ಪವಿತ್ರನ್‌ರನ್ನು ಜಿಲ್ಲಾಧಿಕಾರಿ ಕೆ. ಇಂಬಶೇಖರ್ ಅಮಾನತುಗೊಳಿಸಿದ್ದಾರೆ.  ಸೆ. 12ರಂದು ಇ. ಚಂದ್ರಶೇಖರನ್‌ರನ್ನು ಆಕ್ಷೇಪಿಸುವ  ರೀತಿಯಲ್ಲಿನ ಪೋಸ್ಟನ್ನು ಫೇಸ್‌ಬುಕ್‌ನಲ್ಲಿ ಹಾಕಲಾಗಿತ್ತು. ತನ್ನನ್ನು ವೈಯಕ್ತಿಕವಾಗಿ ಆಕ್ಷೇಪಿಸುವ ರೀತಿಯಲ್ಲಿ ಸಾಮಾಜಿಕ ಜಾಲತಾಣ ಮೂಲಕ ಪ್ರಚಾರ ನಡೆಸುತ್ತಿರುವುದಾಗಿ ಚಂದ್ರಶೇಖರನ್ ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ಗಂಟೆಗಳೊಳಗೆ ಈ ಪೋಸ್ಟನ್ನು ಹಿಂಪಡೆದ ಪವಿತ್ರನ್ ಮುಂದಿನ ದಿನ ನನ್ನಿಂದ ತಪ್ಪಾಗಿದೆ ಎಂದು ವಿವರಣೆಯನ್ನು ನೀಡಿದ್ದರು. ಆದರೆ ಇದರ ಮೊದಲು ಹಲವು ಬಾರಿ ವೈಯಕ್ತಿಕವಾಗಿ ಆಕ್ಷೇಪಿಸುವ ರೀತಿಯಲ್ಲಿ ಪವಿತ್ರನ್ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿರುವುದಕ್ಕೆ ಅಂದು ಮುನ್ನೆಚ್ಚರಿಕೆ ನೀಡಲಾಗಿತ್ತು ಎಂದು ಹೇಳಲಾಗುತ್ತಿದೆ. ಇದು ಶಿಸ್ತು ಉಲ್ಲಂಘನೆ ಹಾಗೂ ಕಂದಾಯ ಇಲಾಖೆಗೆ ಕಳಂಕ ಉಂಟುಮಾಡುವುದಾಗಿದೆ ಎಂದು ಜಿಲ್ಲಾಧಿಕಾರಿ ಅಮಾನತು ಆದೇಶದಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page