ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದ ಮದ್ಯ ಸಹಿತ ಓರ್ವ ಸೆರೆ

ಬದಿಯಡ್ಕ: ಬದಿಯಡ್ಕ ಅಬಕಾರಿ ರೇಂಜ್ ಅಧಿಕಾರಿಗಳು ಇಂದು ಮುಂ ಜಾನೆ ನಡೆಸಿದ ಕಾರ್ಯಾಚರಣೆಯಲ್ಲಿ ದ್ವಿಚಕ್ರ ವಾಹನದಲ್ಲಿ ಸಾಗಿಸುತ್ತಿದ್ದ 5.4 ಲೀಟರ್ ಕರ್ನಾಟಕ ಮದ್ಯ ವಶಪಡಿಸಲಾಗಿದೆ. ಈ ಸಂಬಂಧ ಚೆಂಗಳ ವಿಲ್ಲೇಜ್‌ನ ಕೊಡಕೋಲು ಎಂಬಲ್ಲಿನ ಪ್ರಸಾದ್ ಕೆ.ಜೆ (36) ಎಂಬಾತನನ್ನು ಬಂಧಿಸಲಾಗಿದೆ.  ಬದಿಯಡ್ಕ ಎಕ್ಸೈಸ್ ರೇಂಜ್ ಇನ್‌ಸ್ಪೆಕ್ಟರ್ ಸುಬಿನ್‌ರಾಜ್ ನೇತೃತ್ವದ ತಂಡ ಬದಿಯಡ್ಕ ಸಮೀಪ ಬೀಜಂತ್ತಡ್ಕದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಆಗಮಿಸಿದ ಸ್ಕೂಟರ್‌ಗೆ ನಿಲ್ಲಿಸುವಂತೆ  ಸೂಚಿಸಿದರೂ ನಿಲ್ಲಿಸದೆ ಪರಾರಿಯಾಗಿತ್ತು. ಇದರಿಂದ ಅದನ್ನು ಬೆನ್ನಟ್ಟಿ 2 ಕಿಲೋ ಮೀಟರ್ ದೂರದಲ್ಲಿ ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ 30 ಟೆಟ್ರಾ ಪ್ಯಾಕೆಟ್ ಮದ್ಯ ಪತ್ತೆಯಾಗಿದೆ. ಇದರಂತೆ ಸ್ಕೂಟರ್ ಸವಾರ ಪ್ರಸಾದ್‌ನನ್ನು ಬಂಧಿಸಿ ಮದ್ಯ ಹಾಗೂ ಸ್ಕೂಟರ್ ವಶಪಡಿ ಸಲಾಗಿದೆ. ಬಂಧಿತನನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದ ವೇಳೆ ಆತನಿಗೆ ರಿಮಾಂಡ್ ವಿಧಿಸಲಾಗಿದೆ. ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಮಹಿಳಾ  ಸಿವಿಲ್ ಎಕ್ಸೈಸ್ ಆಫೀಸರ್ ಶಾಲಿನಿ ವಿ, ಸಿ.ಇಒಗಳಾದ ಮೋಹನ್ ಕುಮಾರ್ ಎಲ್, ಜೋಬಿ ಕೆ.ಪಿ, ವಿನೋದ್ ಕೆ ಎಂಬಿವರಿದ್ದರು. ಬಂಧಿತ ಆರೋಪಿ ವಿರುದ್ಧ 2022ರಲ್ಲಿ ಕರ್ನಾಟಕ ಮದ್ಯ ಕೈವಶವಿರಿಸಿದ ಸಂಬಂಧ ಬದಿಯಡ್ಕ ರೇಂಜ್ ಕಚೇರಿಯಲ್ಲಿ ಕೇಸು ದಾಖಲಿಸಲಾಗಿತ್ತೆಂದೂ ಅಧಿಕಾರಿಗಳು ತಿಳಿಸಿದ್ದಾರೆ.

You cannot copy contents of this page