ಕಾಸರಗೋಡು: ನಗರದ ರಾತ್ರಿ ಯೂ ಸಕ್ರಿಯವಾಗಿರುವಂತೆ ಮಾಡಲು ಬಸ್ ಸಮಯ ಕ್ರಮವನ್ನು ಪರಿಷ್ಕರಿಸ ಬೇಕೆಂದು ಶಾಸಕ ಎನ್.ಎ. ನೆಲ್ಲಿಕುನ್ನು ಆಗ್ರಹಿಸಿದರು. ಸರಕಾರದ 100 ದಿನ ಕ್ರಿಯಾಯೋಜನೆಯಂಗವಾಗಿ ಜಿಲ್ಲೆಯ ಪ್ರಯಾಣ ಸಮಸ್ಯೆ ಅನುಭವಿಸುತ್ತಿರುವ ಪ್ರದೇಶಗಳಲ್ಲಿ ಖಾಸಗಿ ಬಸ್ ಸಂಚಾರ ಆರಂಭಿಸುವುದಕ್ಕೆ ಸಂಬಂಧಿಸಿ ರೂಟ್ ಪ್ರೊಪೋಸಲ್ ಆಲೋಚನಾ ಸಭೆಯ ಕಾಸರಗೋಡು ಮಂಡಲ ಮಟ್ಟದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಂಜೆ 7 ಗಂಟೆಯ ವೇಳೆಗೆ ಅಂಗಡಿಗಳೆಲ್ಲ ಮುಚ್ಚುಗಡೆಗೊಳ್ಳು ವುದಕ್ಕೆ ಬದಲಾಗಿ ಇತರ ನಗರಗಳಂತೆ ರಾತ್ರಿ ವೇಳೆಯೂ ಕಾರ್ಯಾಚರಿಸು ವಂತೆ ಮಾಡುವುದಕ್ಕಾಗಿ ಬಸ್ ಸಮಯ ಕ್ರಮವನ್ನು ಪರಿಷ್ಕರಿಸ ಬೇಕಾಗಿರುವುದು ಅನಿವಾರ್ಯ ವೆಂದು ಶಾಸಕರು ನುಡಿದರು.
ಕುಂಬ್ಡಾಜೆ ಪಂಚಾಯತ್ನ ಬೆಳಿಂಜದಿಂದ ಬೆಳ್ಳೂರು ಪಂಚಾಯತ್ನ ನಾಟೆಕಲ್ಲು ಶಾಲೆಗೆ ತೆರಳುವ ವಿದ್ಯಾರ್ಥಿಗಳು ಎದುರಿಸುತ್ತಿರುವ ಪ್ರಯಾಣ ಸಮಸ್ಯೆ ಪರಿಹರಿಸಲು ಹಾಗೂ ಚೆರ್ಕಳ ಹೊಸ ಬಸ್ ನಿಲ್ದಾಣಕ್ಕೆ ಬಸ್ಗಳು ತೆರಳದ ವಿಷಯವು ಚರ್ಚಿಸಬೇಕೆಂದು ಶಾಸಕರು ನುಡಿದರು. ಕೆಎಸ್ಆರ್ಟಿಸಿ ಮೊಟಕುಗೊಳಿಸಿದ ರೂಟ್ಗಳು, ಕೆಎಸ್ಆರ್ಟಿಸಿ, ಖಾಸಗಿ ಬಸ್ಗಳು ಇಲ್ಲದ ರೂಟ್ಗಳು ಮೊದಲಾದವುಗಳ ಬಗ್ಗೆ ಸಮಗ್ರ ಚರ್ಚೆ ನಡೆಸಬೇಕೆಂದು ಶಾಸಕರು ನಿರ್ದೇಶಿಸಿದರು. ಪಂಚಾಯತ್ಗಳು ಗ್ರಾಮ ಬಂಡಿ ಸಂಚಾರಗಳನ್ನು ವಹಿಸಿಕೊಳ್ಳಲು ಸಿದ್ಧವಾಗಬೇಕೆಂದು ಶಾಸಕರು ನುಡಿದರು. ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷ ಅಬ್ಬಾಸ್ ಬೀಗಂ ಅಧ್ಯಕ್ಷತೆ ವಹಿಸಿದರು. ಕಾಸರಗೋಡು ಬ್ಲೋಕ್ ಪಂ. ಅಧ್ಯಕ್ಷೆ ಸಿ.ಎ. ಸೈಮ, ಡಿವೈಎಸ್ಪಿ ಸಿ.ಕೆ. ಸುನಿಲ್ ಕುಮಾರ್, ಪಿಡಬ್ಲ್ಯುಡಿಯ ರವಿ ಕುಮಾರ್, ಕೆಎಸ್ಆರ್ಟಿಸಿಯ ಪ್ರಿಯೇಶ್ ಕುಮಾರ್ ಮಾತನಾಡಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಎನ್ಫೋರ್ಸ್ ಮೆಂಟ್ ಆರ್ಟಿಒ ಟಿ.ಎಸ್. ಉಣ್ಣಿಕೃಷ್ಣನ್ ಸ್ವಾಗತಿಸಿ, ಸೀನಿಯರ್ ಸುಪರಿಂಟೆಂಡೆಂಟ್ ಕೆ. ವಿನೋದ್ ಕುಮಾರ್ ವಂದಿಸಿದರು. ಪಂಚಾಯತ್ ಅಧ್ಯಕ್ಷರುಗಳು, ಇತರ ಜನ ಪ್ರತಿನಿಧಿಗಳು ಬಸ್ ಓನರ್ಸ್ ಸಂಘಟನೆಯ ಅಧ್ಯಕ್ಷ ಮುಹಮ್ಮದ್, ಕಾರ್ಯದರ್ಶಿ ಗಿರೀಶ್, ವ್ಯಾಪಾರಿ ವ್ಯವಸಾಯಿ ಸಮಿತಿಯ ಪ್ರತಿನಿಧಿಗಳು ಭಾಗವಹಿಸಿದರು.






