ಬದಿಯಡ್ಕ: ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಕನ್ಯಪ್ಪಾಡಿಯಲ್ಲಿ ಅಂಗಡಿ ಜಗಲಿಯಲ್ಲಿ ಮಲಗಿದ್ದ ಹಸುವನ್ನು ಕಳವುಗೈದು ಕಾರಿನಲ್ಲಿ ಸಾಗಿಸಿದ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಹಸು ಸಾಗಾಟಕ್ಕೆ ಬಳಸಿದ ಕಾರನ್ನು ವಶಪಡಿಸಲಾಗಿದೆ. ಇತರ ಮೂವರು ಆರೋಪಿಗಳಿಗಾಗಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಮಂಗಳೂರು ಜೋಕಟ್ಟೆ ಬಜ್ಪೆಯ ರಾಸಿಕ್ (21),ಉಳ್ಳಾಲ ಅಳಿಕೆಯ ಮುಹಮ್ಮದ್ ಇಬ್ರಾಸ್ (26) ಎಂಬಿವರನ್ನು ಪೊಲೀಸರು ಬಂಧಿಸಿದ್ದಾರೆ. ಜೂನ್ 16ರಂದು ಮುಂಜಾನೆ 1.30ರ ವೇಳೆ ಕನ್ಯಪ್ಪಾಡಿ ರಹ್ಮತ್ ಮಂಜಿಲ್ನ ಕೆ.ಎಂ. ಮುಹಮ್ಮದ್ರ ಮನೆಯ ಮುಂಭಾಗದಲ್ಲಿರುವ ಅಂಗಡಿಯ ಜಗಲಿಯಲ್ಲಿ ಮಲಗಿದ್ದ ಹಸುವನ್ನು ಆರೋಪಿಗಳು ಕಳವು ನಡೆಸಿದ್ದರು. ಮರುದಿನ ಬೆಳಿಗ್ಗೆ ಹಸು ನಾಪತ್ತೆ ಯಾದ ಹಿನ್ನೆಲೆಯಲ್ಲಿ ಮನೆಯ ಸಿ.ಸಿ ಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಹಸುವನ್ನು ಕಾರಿನಲ್ಲಿ ಸಾಗಿಸಿರುವು ದಾಗಿ ತಿಳಿದುಬಂದಿದೆ. ಈ ಬಗ್ಗೆ ಬದಿಯಡ್ಕ ಪೊಲೀಸರಿಗೆ ದೂರು ನೀಡಲಾಗಿತ್ತು. ಇನ್ಸ್ಪೆಕ್ಟರ್ ಅನೂಪ್ ಕೃಷ್ಣರ ಮೇಲ್ನೋಟದಲ್ಲಿ ಎಎಸ್ಐ ಪ್ರಸಾದ್, ಸೀನಿಯರ್ ಪೊಲೀಸ್ ಆಫೀಸರ್ ಗೋಕುಲ್, ಸಿವಿಲ್ ಪೊಲೀಸರ್ ಆಫೀಸರ್ ಗಳಾದ ಅಜಿತ್, ಶ್ರೀನೇಶ್, ಹರಿಪ್ರ ಸಾದ್ ಎಂಬಿವರು ಕಾರ್ಯಾ ಚರಣೆ ನಡೆಸಿ ಆರೋಪಿಗಳನ್ನು ನಿನ್ನೆ ಮಧ್ಯಾಹ್ನ ಮಂಗಳೂರು ನಗರದಿಂದ ಬಂಧಿಸಿದ್ದಾರೆ. ಸುಮಾರು ೩೦ ಸಾವಿರ ರೂಪಾಯಿ ಬೆಲೆ ಅಂದಾಜಿಸುವ ಹಸುವನ್ನು ಆರೋಪಿಗಳು ಕಳವು ನಡೆಸಿದ್ದು, ಅದನ್ನು ಉಳ್ಳಾಲದ ಕಸಾಯಿಖಾನೆಗೆ ಮಾರಾಟ ನಡೆಸಿರುವುದಾಗಿ ತನಿಖೆಯಲ್ಲಿ ತಿಳಿದುಬಂದಿದೆಯೆಂದು ಪೊಲೀಸರು ತಿಳಿಸಿದ್ದಾರೆ.







