ವಿವಾಹ, ಮನೆ ರಿಪೇರಿ, ವೈದ್ಯಕೀಯ ಚಿಕಿತ್ಸೆಗೆ ಸಾಯಿರಾಂ ಕೃಷ್ಣ ಭಟ್‌ರಿಂದ ನೆರವು

ಬದಿಯಡ್ಕ: ಕಿಳಿಂಗಾರು ಸಾಯಿರಾಂ ಕೃಷ್ಣ ಭಟ್ ಬಡಜನತೆಗೆ ಉಚಿತವಾಗಿ ಕೊಡಮಾಡುವ ವಿವಿಧ ಸೌಲಭ್ಯಗಳ ವಿತರಣೆ ನಿನ್ನೆ ಕಿಳಿಂಗಾರು ಸಾಯಿನಿಲಯದಲ್ಲಿ ಜರಗಿತು. ಸಾಯಿರಾಂ ಗೋಪಾಲಕೃಷ್ಣ ಭಟ್‌ರ ನಂತರ ಅವರ ಪುತ್ರ ಕೆ.ಎನ್.ಕೃಷ್ಣ ಭಟ್ ಹಾಗೂ ಕುಟುಂಬ ಬಡಜನತೆಯ ಮದುವೆಗೆ ಧನಸಹಾಯ, ಮನೆ ರಿಪೇರಿ, ಹೊಲಿಗೆ ಯಂತ್ರ ವಿತರಣೆ ಮೊದಲಾದ ಸೇವಾಕಾರ್ಯಗಳು ನಡೆಸುತ್ತಿದೆ. ಒಂದು ಕಾಲಿಗೆ ಬಲವಿಲ್ಲದ ಅಮ್ಮು ಮುಕಾರಿಗದ್ದೆ ಎಂಬವರ ಮಗಳ ವಿವಾಹಕ್ಕೆ 20000 ರೂಪಾಯಿಯನ್ನು ವೇದಮೂರ್ತಿ ಮಹಾಲಿಂಗೇಶ್ವರ ಉಪಾಧ್ಯಾಯ ಹಸ್ತಾಂತರಿಸಿದರು.
ಪೆರ್ಲದ ಕಿಶನ್ ಕುಮಾರ್ ಎಂಬವರಿಗೆ ಮನೆ ರಿಪೇರಿಗೆ 20000 ರೂ, ಆಟೋ ಚಾಲಕ ಚಂದ್ರಗೋಪಾಲ ಕಾಕುಂಜೆ ಎಂಬವರ ಪತ್ನಿ ಲತಾ ಕುಮಾರಿ ಇವರಿಗೆ ವೈದ್ಯಕೀಯ ಸಹಾಯವಾಗಿ ರೂ. 20000 ಹಾಗೂ ರೋಶಿನಿ ಕೆ.ಎಂ.ನೀರ್ಚಾಲು, ಕುಮುದಾ ನಾಯ್ಕಾಪು, ಆಯಿಶತ್ ಸಜನಾ ಬಿರ್ಮಿನಡ್ಕ, ಹೇಮಲತಾ ಕಟ್ಟತ್ತಂಗಡಿ ಮತ್ತು ಪಲ್ಲವಿ ಎನ್.ಕೆ. ನಲ್ಕ ಇವರಿಗೆ ಹೊಲಿಗೆ ಯಂತ್ರಕ್ಕಾಗಿ ಧನಸಹಾಯ ಹಸ್ತಾಂತರಿಸಲಾಯಿತು. ಸಾಯಿರಾಂ ಕೆ.ಎನ್.ಕೃಷ್ಣ ಭಟ್, ಪುತ್ರ ವೇಣುಗೋಪಾಲ ಕೆ.ಎನ್., ಪಂಚಾಯಿತ್ ಉಪಾಧ್ಯಕ್ಷ ಅಬ್ಬಾಸ್ ಎಂ., ಉದನೇಶ್ವರ ಭಟ್ ಅಳಿಕೆ, ಸುಬ್ಬಣ್ಣ ಭಟ್, ಮಹೇಶ್ ಪಿ., ಶಾಂತಿ, ಸಂದೇಶ್, ಶಿವಕುಮಾರ್, ರವಿ ಮದನಗುಳಿ, ಸಂಜೀವ ರೈ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You cannot copy content of this page