ಮನೆಯ ಹೆಂಚು ತೆಗೆದು ಒಳನುಗ್ಗಿ ಚಿನ್ನ, ಸೀರೆಗಳನ್ನು ಕಳವುಗೈದ ಆರೋಪಿ ಸೆರೆ
ಕಾಸರಗೋಡು: ಬೇಡಗಂ ಕೊಳತ್ತೂರಿನಲ್ಲಿ ಮನೆಯ ಹೆಂಚು ತೆಗೆದು ಒಳಗೆ ನುಗ್ಗಿ ಅರ್ಧ ಪವನ್ ಚಿನ್ನಾಭರಣ ಹಾಗೂ ಸೀರೆಗಳನ್ನು ಕಳವುಗೈದ ಪ್ರಕರಣದ ಆರೋಪಿಯನ್ನು ಬಂಧಿಸಲಾಗಿದೆ. ಕೊಳತ್ತೂರು ಮನಿಯಾರಂ ಕೊಚ್ಚಿಯ ಭಾಸ್ಕರನ್ (45) ಎಂಬಾತನನ್ನು ಬೇಡಗಂ ಪೊಲೀಸರು ಬಂಧಿಸಿದ್ದಾರೆ. ಈತನಿಗೆ ನ್ಯಾಯಾಲಯ ಎರಡು ವಾರಗಳ ರಿಮಾಂಡ್ ವಿಧಿಸಿದೆ.
ಸೋಮವಾರ ರಾತ್ರಿ ಕೊಳತ್ತೂರು ನಾರಕ್ಕೋಟ್ನ ಸರೋಜಿನಿ (62) ಎಂಬವರ ಮನೆಯಲ್ಲಿ ಕಳವು ನಡೆದಿದೆ. ಮನೆಯಲ್ಲಿ ಬೇರೆ ಯಾರೂ ಇಲ್ಲದುದರಿಂದ ಸರೋಜಿನಿ ಸಮೀಪದಲ್ಲಿ ವಾಸಿಸುವ ಮಗಳ ಮನೆಗೆ ತೆರಳಿದ್ದರು. ಮಂಗಳವಾರ ಬೆಳಿಗ್ಗೆ ಅವರು ಮರಳಿ ಮನೆಗೆ ತಲುಪಿದಾಗ ಕಳವು ನಡೆದ ವಿಷಯ ತಿಳಿದು ಬಂದಿದೆ. ಏಣಿ ಮೂಲಕ ಮನೆಯ ಛಾವಣಿಗೆ ಹತ್ತಿ ಹೆಂಚು ತೆಗೆದು ಒಳನುಗ್ಗಿದ ಕಳ್ಳ ಕಪಾಟು ಮುರಿದು ಅದರಲ್ಲಿದ್ದ ಚಿನ್ನ ಹಾಗೂ ನಾಲ್ಕರಷ್ಟು ಸೀರೆಗಳನ್ನು ಕಳವುಗೈದಿದ್ದನು. ಅನಂತರ ಮನೆಯ ಅಡುಗೆ ಕೋಣೆ ಬಾಗಿಲು ತೆರೆದು ಹೊರಗೆ ಹೋದ ಕಳ್ಳ ಮತ್ತೆ ಮನೆ ಛಾವಣಿಗೆ ಹತ್ತಿ ತೆರವುಗೊಳಿಸಿದ ಹೆಂಚನ್ನು ಮರು ಸ್ಥಾಪಿಸಿ ಕಾಲ್ಕಿತ್ತಿದ್ದನು. ಬೇಡಗಂ ಪೊಲೀಸರು ನಡೆಸಿದ ತನಿಖೆಯಲ್ಲಿ ಕಳವು ನಡೆಸಿದ ವ್ಯಕ್ತಿಯನ್ನು ಪತ್ತೆಹಚ್ಚಿ ಬಂಧಿಸಲಾಗಿದೆ. ಕಳವಿಗೀಡಾದ ಚಿನ್ನ ಹಾಗೂ ಸೀರೆಗಳನ್ನು ಭಾಸ್ಕರನ್ನ ಸಹಾಯದಿಂದ ಪತ್ತೆಹಚ್ಚಲಾಗಿದೆ.