ಹಿತ್ತಿಲಲ್ಲಿ ಕಟ್ಟಿ ಹಾಕಿದ 3 ದನಗಳ ಕಳವು : ಹೈನುಗಾರ ಅಬ್ದುಲ್ ಜಲೀಲ್ರಿಗೆ ಕಣ್ಣೀರ ಬಕ್ರೀದ್
ಕಾಸರಗೋಡು: ಭಾರೀ ಮಳೆ ಹಿನ್ನೆಲೆಯಲ್ಲಿ ಹಟ್ಟಿಗೆ ನೀರು ಸೇರಿದ ಕಾರಣ ಹಿತ್ತಿಲಲ್ಲಿ ಕಟ್ಟಿಹಾಕಿದ ಮೂರು ದನಗಳನ್ನು ಕಳವು ನಡೆಸಿದ ಘಟನೆ ನಡೆದಿದೆ. ಕೂಡ್ಲು, ಚೌಕಿ, ಬದರ್ನಗರ ನಿವಾಸಿ ಅಬ್ದುಲ್ ಜಲೀಲ್ (47)ರ ದೂರಿನಂತೆ ಕಾಸರಗೋಡು ನಗರ ಠಾಣೆ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ನಿನ್ನೆ ಬೆಳಿಗ್ಗೆ ದನಗಳು ನಾಪತ್ತೆಯಾದ ಬಗ್ಗೆ ತಿಳಿದಿರುವುದಾಗಿ ಅಬ್ದುಲ್ ಜಲೀಲ್ ನುಡಿದರು. ಹೈನುಗಾರನಾಗಿರುವ ಇವರು ಇತ್ತೀಚೆಗೆ ಭಾರೀ ಮಳೆ ಸುರಿದ ಹಿನ್ನೆಲೆಯಲ್ಲಿ ಹಟ್ಟಿಯಲ್ಲಿ ನೀರು ಸೇರಿತ್ತು. ಆದ್ದರಿಂದ ಮನೆ ಸಮೀಪದ ಹಿತ್ತಿಲಿನಲ್ಲಿ ನಾಲ್ಕು ದನಗಳನ್ನು ಕಟ್ಟಿ ಹಾಕಿದ್ದರು. ಕರೆಯುವ ಒಂದು ದನವನ್ನು ಒಂದು ಕಡೆ ಹಾಗೂ ಇತರ ಮೂರು ದನಗಳನ್ನು ಇನ್ನೊಂದು ಕಡೆ ಕಟ್ಟಿದ್ದರು. ಒಂದು ಕಡೆಯಲ್ಲಿ ಕಟ್ಟಿಹಾಕಿದ ದನಗಳನ್ನು ಕಳವು ನಡೆಸಿರುವುದಾಗಿ ಜಲೀಲ್ ತಿಳಿಸಿದ್ದಾರೆ. ಈ ಪರಿಸರಕ್ಕೆ ಯಾವುದೋ ವಾಹನ ಬಂದ ಗುರುತು ಇದೆ ಎಂದು ಅವರು ತಿಳಿಸಿದ್ದಾರೆ. ಜಾನುವಾರು ಸಾಕಣೆ ಮೂಲಕ ಲಭಿಸುವ ಅಲ್ಪ ಆದಾಯ ಇವರ ಬದುಕಿನ ಮಾರ್ಗವಾಗಿದ್ದು, ದನಗಳ ಕಳವಿನಿಂದಾಗಿ ಬಾಡಿಗೆ ಮನೆಯಲ್ಲಿ ರುವ ಇವರ ಬದುಕು ಸಂಕಷ್ಟದಲ್ಲಾ ಗಿದೆ ಎಂದು ಅವರು ತಿಳಿಸಿದ್ದಾರೆ.