ತುರ್ತು ಪರಿಸ್ಥಿತಿ ವಿರುದ್ಧ ನಡೆದ ಹೋರಾಟದ ಮುಂಚೂಣಿಯಲ್ಲಿ ನಿಂತು ಹೋರಾಡಿದ್ದು ಆರ್.ಎಸ್.ಎಸ್-ರಾಜ್ಯಪಾಲ ಪಿ.ಎಸ್. ಶ್ರೀಧರನ್ ಪಿಳ್ಳೆ
ಕಾಸರಗೋಡು: 1975ರ ಕರಾಳ ಅಧ್ಯಾಯವಾದ ತುರ್ತು ಪರಿಸ್ಥಿತಿಯ ವಿರುದ್ಧ ನಡೆದ ಹೋರಾಟದ ಮುಂ ಚೂಣಿಯಲ್ಲಿ ನಿಂತು ಹೋರಾಡಿದ್ದು ಆರ್ಎಸ್ಎಸ್ ಆಗಿದೆಯೆಂದು ಗೋವಾ ರಾಜ್ಯಪಾಲ ನ್ಯಾಯವಾದಿ ಪಿ.ಎಸ್. ಶ್ರೀಧರನ್ ಪಿಳ್ಳೆ ನುಡಿದರು.
1975ರ ತುರ್ತು ಪರಿಸ್ಥಿತಿ ವಿರುದ್ದ ಪ್ರಜಾಪ್ರಭುತ್ವ ಸಂರಕ್ಷಣಾ ಹೋರಾಟ ಸಮಿತಿಯ ಆಶ್ರಯದಲ್ಲಿ ಕಾಸರ ಗೋಡು ಮುನಿಸಿಪಲ್ ಟೌನ್ ಹಾಲ್ನಲ್ಲಿ ನಿನ್ನೆ ನಡೆದ ತುರ್ತು ಪರಿಸ್ಥಿತಿಯ ೫೦ನೇ ವರ್ಷದ ಅಂಗವಾಗಿ ನಡೆದ ಸ್ಮೃತಿ ಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಶ್ರೀಧರನ್ ಪಿಳ್ಳೆ ಮಾತನಾಡುತ್ತಿದ್ದರು.
ತುರ್ತು ಪರಿಸ್ಥಿತಿ ವಿರುದ್ದ ನಡೆದ ಹೋರಾಟದಲ್ಲಿ ಆರ್ಎಸ್ಎಸ್ ನೇತೃತ್ವ ನೀಡಿಲ್ಲವೆಂಬ ಮುಖ್ಯಮಂತ್ರಿ ಪಿಣರಾಯಿ ವಿಜಯನ್ರ ಹೇಳಿಕೆಗೂ ಶ್ರೀಧರನ್ ಪಿಳ್ಳೆ ಈ ಮೂಲಕ ಪ್ರತ್ಯುತ್ತರ ನೀಡಿದ್ದಾರೆ. ತುರ್ತು ಪರಿಸ್ಥಿತಿಯ ವೇಳೆ ನಡೆದ ಹೋರಾಟ ದಲ್ಲಿ ಸಿಪಿಎಂ ಪಾಲ್ಗೊಂಡಿತ್ತೇ ಎಂದು ಅವರು ಪ್ರಶ್ನಿಸಿದ್ದಾರೆ. ಆ ಹೋರಾಟದಲ್ಲಿ ಸಿಪಿಎಂ ಭಾಗಿಯಾಗಿಲ್ಲ ವೆಂಬುದಕ್ಕೆ ಸ್ಪಷ್ಟ ಉದಾಹರಣೆಗಳೂ ಇದೆ ಎಂದು ಅವರು ಹೇಳಿದರು. ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿದ ಕಾರ್ಯಕರ್ತರು ಭಾರೀ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ನಿವೃತ್ತ ಸರಕಾರಿ ಕಾರ್ಯದರ್ಶಿ ಕೆ. ಗೋಪಾಲಕೃಷ್ಣ ಭಟ್ ಅಧ್ಯಕ್ಷತೆ ವಹಿಸಿ ದ್ದರು. ಸಂಸ್ಕೃತ ಭಾರತಿ ರಾಷ್ಟ್ರೀಯ ಉಪಾಧ್ಯಕ್ಷ ದಿನೇಶ್ ಕಾಮತ್ ಪ್ರಧಾನ ಭಾಷಣ ಮಾಡಿದರು.