ತಾಯಿಯನ್ನು ಮಗ ಕೊಲೆಗೈದ ಪ್ರಕರಣ: ಮಾದಕವಸ್ತು ಮಾಫಿಯಾಗಳನ್ನು ರಾಜ್ಯ ಸರಕಾರ ಪ್ರೋತ್ಸಾಹಿಸಿದ ಫಲ-ಪಿ.ಆರ್. ಸುನಿಲ್
ಕಾಸರಗೋಡು: ವರ್ಕಾಡಿಯಲ್ಲಿ ತಾಯಿಯನ್ನು ಮಗ ಸುಟ್ಟು ಕೊಲೆಗೈದಿರುವುದು ಪಿಣರಾಯಿ ಸರಕಾರದ ಆಡಳಿತ ಮುಂದುವರಿ ಕೆಯ ಪ್ರಭಾವವಾಗಿದೆಯೆಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್ ಆರೋಪಿಸಿದ್ದಾರೆ. ಮಾದಕವಸ್ತುವಿನ ಚಟ ಬೆಳೆಸಿಕೊಂಡ ಮಗ ತಾಯಿಯನ್ನು ಸುಟ್ಟು ಕೊಲೆಗೈದ ಘಟನೆ ಅತೀ ದಾರುಣ ಹಾಗೂ ನಾಡನ್ನು ಬೆಚ್ಚಿ ಬೀಳಿಸು ವಂತದ್ದಾಗಿದೆ. ಮಾದಕವಸ್ತುಗಳ ಚಟ ಬೆಳೆಸಿಕೊಂಡವರು ಮೊದಲು ಆಕ್ರಮಿಸುವುದು ಸ್ವಂತ ಕುಟುಂಬದವರನ್ನಾಗಿದೆ. ಮಾದಕ ಮಾಫಿಯಾ ಗಳನ್ನು ಇಲ್ಲದಾಗಿಸುವಲ್ಲಿ ಸರಕಾರದ ಭಾಗದಿಂದ ಗಂಭೀರ ಲೋಪವುಂಟಾಗಿದೆ. ಇದರ ಪರಿಣಾಮವಾಗಿಯೇ ವರ್ಕಾಡಿಯಲ್ಲಿ ಕೊಲೆಕೃತ್ಯ ನಡೆದಿದೆ. ತೆರಿಗೆ ಆದಾಯದ ಮೇಲೆ ಕಣ್ಣಿರಿಸಿ ಹೆಚ್ಚೆಚ್ಚು ಔಟ್ಲೆಟ್ಗಳನ್ನು ಆರಂಭಿಸಿ ಮದ್ಯ ಬಳಕೆಯನ್ನು ಪ್ರೋತ್ಸಾಹಿಸುವ ರಾಜ್ಯ ಸರಕಾರಕ್ಕೆ ಇದರ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲವೆಂದೂ ಅವರು ತಿಳಿಸಿದರು. ಮದ್ಯ, ಗಾಂಜಾ ಸಹಿತ ಮಾದಕವಸ್ತುಗಳು ನಮ್ಮ ರಾಜ್ಯದಲ್ಲಿ ಯಾವುದೇ ಪ್ರಾಯದವರಿಗೂ ಲಭಿಸುವ ಸ್ಥಿತಿಯಿದೆ. ಗಾಂಜಾ ಸಹಿತ ಮಾದಕವಸ್ತು ಬಳಕೆ ತಡೆಯಲು ಯುವಜನ ಸಂಘಟನೆಗಳು, ಸಾಮಾಜಿಕ ಸಮುದಾಯ, ರಾಜಕೀಯ ಸಂಘಟನೆಗಳು ಕೈಜೋಡಿಸಬೇಕೆಂದೂ ಸುನಿಲ್ ವಿನಂತಿಸಿದ್ದಾರೆ.
ಮಂಜೇಶ್ವರ ಠಾಣೆ ವ್ಯಾಪ್ತಿ ಮಾದಕದ್ರವ್ಯಗಳ ನಾಡಾಗಿ ಬದಲಾಗಿದೆ- ಬಿಜೆಪಿ
ಮಂಜೇಶ್ವರ: ಗಾಂಜಾ, ಆಧುನಿಕ ಅಮಲು ಪದಾರ್ಥಗಳ ನಾಡಾಗಿ ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿ ಬದಲಾಗಿದೆ ಎಂದು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಆರೋಪಿಸಿದೆ. ಕೇರಳ -ಕರ್ನಾಟಕ ಗಡಿ ಭಾಗವಾಗಿರುವ ಮಂಜೇಶ್ವರ, ವರ್ಕಾಡಿ, ಪೈವಳಿಕೆ ಪಂಚಾಯತ್ಗಳಲ್ಲಿ ಅವ್ಯಾಹಕವಾಗಿ ಮಾದಕ ಚಟುವಟಿಕೆಗಳು ನಡೆಯುತ್ತಿದೆ ಎಂದು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಆರೋಪಿಸಿದೆ. ಹೀಗಿದ್ದರೂ ಪೊಲೀಸ್ ಇಲಾಖೆ ಕುರುಡರಂತೆ ವರ್ತಿಸುತ್ತಿದ್ದು, ವರ್ಕಾಡಿಯಲ್ಲಿ ತಾಯಿಯನ್ನೇ ಪುತ್ರ ಬೆಂಕಿ ಹಚ್ಚಿ ಕೊಲ್ಲಲು ಪೊಲೀಸ್ ಇಲಾಖೆಯ ಬೇಜವಾಬ್ದಾರಿತನ ಕಾರಣವಾಗಿದೆ ಎಂದು ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ. ಆರೋಪಿಸಿದ್ದಾರೆ. ಮಂಜೇಶ್ವರ ಪೊಲೀಸ್ ಠಾಣೆಗೆ ಅಗತ್ಯ ಪೊಲೀಸ್ ನೇಮಕಾತಿ ನಡೆಸಬೇಕು, ಪೈವಳಿಕೆ ವ್ಯಾಪ್ತಿಯಲ್ಲಿ ನೂತನ ಪೊಲೀಸ್ ಠಾಣೆ ಮಂಜೂರುಗೊಳಿಸಬೇಕೆಂದು ಅವರು ಆಗ್ರಹಿಸಿದರು.