ಗುತ್ತಿಗೆ ವಂಚನೆ: ಕುಂಬಳೆ ಪಂಚಾಯತ್ ಅಧ್ಯಕ್ಷೆಯ ಪತಿ ವಿರುದ್ಧ ಪಂ. ಕಾರ್ಯದರ್ಶಿ ದೂರಿನಂತೆ ಕೇಸು ದಾಖಲು
ಕುಂಬಳೆ: ಗುತ್ತಿಗೆದಾರನೂ ಕುಂಬಳೆ ಪಂಚಾಯತ್ ಅಧ್ಯಕ್ಷೆ ತಾಹಿರಾ ಯೂಸಫ್ರ ಪತಿಯಾದ ಕೆ.ವಿ. ಯೂಸಫ್ ವಿರುದ್ಧ ಗುತ್ತಿಗೆ ವಂಚನೆಗೆ ಸಂಬಂಧಿಸಿ ಪಂಚಾಯತ್ ಕಾರ್ಯದರ್ಶಿ ಕುಂಬಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಯೂಸಫ್ರ ಹೊರತು ಯೂಸಫ್ರೊಂದಿಗೆ ಗುತ್ತಿಗೆ ಪಾಲುದಾರಿಕೆ ವಹಿಸುವ ರಫೀಕ್ ವಿರುದ್ಧವೂ ದೂರು ನೀಡಲಾಗಿದೆ. ಯೂಸಫ್ ಹಾಗೂ ಗುತ್ತಿಗೆ ಪಾಲುದಾರ ರಫೀಕ್ 23ರಂದು ಸಂಜೆ4.30 ಕ್ಕೆ ಪಂಚಾಯತ್ ಸೀನಿಯರ್ ಸೆಕ್ರೆಟರಿ ಕೆ. ಸುಮೇಶ್ರ ಕೊಠಡಿಗೆ ನುಗ್ಗಿ ನಿಬಂಧನೆಗಳನ್ನು ಪಾಲಿಸದೆ ಇವರು ನಿರ್ಮಿಸಿದ ಬಸ್ ವೈಟಿಂಗ್ ಶೆಡ್ಗಳ ಹಣ ಕೂಡಲೇ ನೀಡಬೇಕೆಂದು ಒತ್ತಾಯಿಸಿ ಗದ್ದಲ ಸೃಷ್ಟಿಸಿದ್ದು ಅಲ್ಲದೆ ಕಾರ್ಯದರ್ಶಿಯ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಮಾತ್ರವಲ್ಲ ಪಂಚಾಯತ್ ಸೀನಿಯರ್ ಸೆಕ್ರೆಟರಿ ಸುಮೇಶ್ರ ಕಚೇರಿಗೆ ನುಗ್ಗಿ ಬೆದರಿಕೆಯೊಡ್ಡಲಾಯಿತೆಂಬ ಆರೋ ಪದಂತೆ ಕೇಸು ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕಾನೂನು ಕ್ರಮಗಳನ್ನು ಪಾಲಿಸದೆ ಪಂಚಾಯತ್ನ ಬಸ್ ವೈಟಿಂಗ್ ಶೆಡ್ಗಳನ್ನು ಇವರು ನಿರ್ಮಿಸಿರುವುದಾಗಿಯೂ ದೂರಿನಲ್ಲಿ ತಿಳಿಸಲಾಗಿದೆ.
ಅಲ್ಲದೆ ನಿರ್ಮಾಣದಲ್ಲಿ ಭಾರೀ ವಂಚನೆ ನಡೆದಿರುವುದಾಗಿಯೂ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಮುಖ್ಯಮಂತ್ರಿ ಸಹಿತ ಉನ್ನತರಿಗೆ ದೂರು ನೀಡಿರುವುದಾಗಿ ಸೂಚನೆಯಿದೆ. ಈ ಕುರಿತು ಡಿವೈಎಫ್ಐ ಮಾಹಿತಿ ಹಕ್ಕು ಕಾನೂನು ಪ್ರಕಾರ ಮಾಹಿತಿ ಆಗ್ರಹಿಸಿದ್ದು ಅಲ್ಲದೆ ಅಧಿಕಾರಿಗಳಿಗೆ ದೂರು ನೀಡಲಾಗಿದೆ.