ಭಾರತಾಂಬೆ ಚಿತ್ರ ವಿವಾದ: ರಾಜ್ಯಪಾಲರೊಂದಿಗೆ ಅಗೌರವ ; ಕೇರಳ ವಿ. ವಿ. ರಿಜಿಸ್ಟ್ರಾರ್ ಅಮಾನತು
ತಿರುವನಂತಪುರ: ಕೇರಳ ರಾಜ್ಯಪಾಲರು ಭಾಗವಹಿಸಿದ ಕಾರ್ಯಕ್ರಮದಲ್ಲಿ ಭಾರತಾಂಬೆಯ ಚಿತ್ರವಿರಿಸಿದ ವಿಷಯದಲ್ಲಿ ರಾಜ್ಯಪಾಲ ರಾಜೇಂದ್ರ ಅರ್ಲೇಖರ್ರ ಮೇಲೆ ಅಗೌರವ ತೋರಿಸಿದ ಕಾರಣ ನೀಡಿ ಕೇರಳ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ. ಕೆ.ಎಸ್. ಅನಿಲ್ ಕುಮಾರ್ರನ್ನು ಪ್ರಸ್ತುತ ವಿವಿಯ ಉಪ ಕುಲಪತಿ ಡಾ. ಮೋಹನನ್ ಕುನ್ನುಮ್ಮಲ್ರವರು ತನಿಖಾ ವಿಧೇಯಗೊಳಿಸಿ ಸೇವೆಯಿಂದ ಅಮಾನತುಗೊಳಿಸಿದ್ದಾರೆ.
ಈ ಅಮಾನತುಕ್ರಮ ಕೈಗೊಂಡ ಬೆನ್ನಲ್ಲೇ ಅದನ್ನು ರಾಜ್ಯ ಹೈಕೋರ್ಟ್ ನಲ್ಲಿ ಪ್ರಶ್ನಿಸಲು ರಿಜಿಸ್ಟ್ರಾರ್ ಮುಂದಾಗಿ ದ್ದಾರೆ. ಈ ಕ್ರಮವನ್ನು ನಾನು ಕಾನೂನಾ ತ್ಮಕವಾಗಿ ಎದುರಿಸುವುದಾಗಿಯೂ ಅವರು ಹೇಳಿದ್ದಾರೆ. ರಿಜಿಸ್ಟ್ರಾರ್ರನ್ನು ಅಮಾನತುಗೊಳಿಸಿದ ಬೆನ್ನಲ್ಲೇ ಅದನ್ನು ಪ್ರತಿಭಟಿಸಿ ಡಿವೈಎಫ್ಐ ಮತ್ತು ಎಸ್ಎಫ್ಐ ಕಾರ್ಯಕರ್ತರು ನಿನ್ನೆ ರಾತ್ರಿ ರಾಜ್ಭವನಕ್ಕೆ ಮಾರ್ಚ್ ನಡೆಸಿದ್ದು, ಅದು ಘರ್ಷಣೆಗೂ ದಾರಿ ಮಾಡಿಕೊಟ್ಟಿದೆ. ಪ್ರತಿಭಟನಾಗಾರರು ಬಾರಿಕೇಡ್ ಮೇಲೇರಿ ಮುಂದೆ ಸಾಗಲೆತ್ನಿಸಿದಾಗ ಪೊಲೀಸರು ಅವರ ಮೇಲೆ ಜಲಫಿರಂಗಿ ಪ್ರಯೋಗಿಸಿದರು. ನಂತರ ಪ್ರತಿಭಟನಾಗಾರರನ್ನು ಬಲವಂ ತವಾಗಿ ಹಿಡಿದು ತೆರವುಗೊಳಿಸಿದ ಬಳಿಕ ಸಂಘರ್ಷ ಶಮನಗೊಂಡಿತು.
ಜೂನ್ ೨೫ರಂದು ಕೇರಳ ವಿಶ್ವವಿದ್ಯಾಲಯದ ಸೆನೆಟ್ ಹಾಲ್ನಲ್ಲಿ ಶ್ರೀ ಪದ್ಮನಾಭ ಸೇವಾ ಸಮಿತಿ ಹಮ್ಮಿಕೊಂಡ ತುರ್ತು ಪರಿಸ್ಥಿತಿಯ 50ನೇ ವಾರ್ಷಿಕ ಕಾರ್ಯಕ್ರಮದಲ್ಲಿ ಭಾರತಾಂಬೆಯ ಚಿತ್ರ ಇರಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ರಾಜ್ಯಪಾಲರು ಭಾಗವಹಿಸಿದ್ದರೂ ಪ್ರಸ್ತುತ ಸೆನೆಟ್ ಹಾಲ್ನಲ್ಲಿ ಧಾರ್ಮಿಕ ಚಿಹ್ನೆ ಬಳಕೆ ಹಾಗೂ ಆರಾಧನೆ ನಡೆಸಬಾರದೆಂಬ ನಿಬಂಧನೆಯನ್ನು ಉಲ್ಲಂಘಿಸಲಾಗಿದೆ ಎಂದು ದೂರಿ ಆ ಕಾರ್ಯಕ್ರಮಕ್ಕೆ ನೀಡಲಾಗಿದ್ದ ಅನುಮತಿಯನ್ನು ರಿಜಿಸ್ಟ್ರಾರ್ ದಿಢೀರ್ ಆಗಿ ರದ್ದುಪಡಿಸಿದ್ದರು. ಮಾತ್ರವಲ್ಲ ಆ ಬಗ್ಗೆ ಪೊಲೀಸರಿಗೂ ದೂರು ನೀಡಿದ್ದರು. ಅದರಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿ ದ್ದರು. ಆ ಮೂಲಕ ರಾಜ್ಯಪಾಲರು ಭಾಗವಹಿಸಿದ ಕಾರ್ಯಕ್ರಮವನ್ನು ಕಲುಷಿತಗೊಳಿಸಲು ಕೆಲವರ ಆಜ್ಞೆ ಪ್ರಕಾರ ರಿಜಿಸ್ಟ್ರಾರ್ ವರ್ತಿಸಿದ್ದರು ಮಾತ್ರವಲ್ಲ ಆ ಮೂಲಕ ಅವರು ರಾಜ್ಯಪಾಲರಿಗೆ ಅಗೌರವ ತೋರಿಸಿದ್ದರೆಂದು ರಿಜಿಸ್ಟ್ರಾರ್ರನ್ನು ಅಮಾನತುಗೊಳಿಸಿರುವ ಕಾರಣವನ್ನು ಉಪಕುಲಪತಿ ನೀಡಿದ್ದಾರೆ. ಅಮಾನತು ಕ್ರಮ ಕೈಗೊಳ್ಳುವ ಮೊದಲು ರಿಜಿಸ್ಟ್ರಾರ್ರಿಂದ ಸ್ಪಷ್ಟೀಕರಣವನ್ನೂ ಕೇಳಲಾಗಿತ್ತು. ಅದಕ್ಕೆ ಅವರು ತೃಪ್ತಿಕರ ಉತ್ತರ ನೀಡಿಲ್ಲವೆಂದೂ ಉಪಕುಲಪತಿ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.