ಅನಧಿಕೃತ ಮರಳು ಸಾಗಾಟ: 2ವಾಹನ ವಶ; ಕೇಸು ದಾಖಲು
ಮಂಜೇಶ್ವರ: ದಾಖಲುಪತ್ರಗಳಿಲ್ಲದೆ ಅನಧಿಕೃತವಾಗಿ ಹೊಳೆಯಿಂದ ಮರಳು ಸಾಗಿಸುತ್ತಿದ್ದ ಓಮ್ನಿ, ಟಿಪ್ಪರ್ ಲಾರಿಯನ್ನು ಮಂಜೇಶ್ವರ ಪೊಲೀಸರು ವಶಕ್ಕೆ ತೆಗೆದು ಚಾಲಕರನ್ನು ಸೆರೆ ಹಿಡಿದಿದ್ದಾರೆ. ಉಪ್ಪಳ ಪೇಟೆಯಲ್ಲಿ ವಾಹನ ತಪಾಸಣೆ ವೇಳೆ ಪತ್ವಾಡಿ ಭಾಗದಿಂದ ಆಗಮಿಸಿದ ಟಿಪ್ಪರ್ ಲಾರಿಯನ್ನು ತಪಾಸಣೆ ನಡೆಸಿದಾಗ ಅನಧಿಕೃತವಾಗಿ ಮರಳು ಸಾಗಿಸುತ್ತಿರುವುದು ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಲಾರಿಯನ್ನು ವಶಕ್ಕೆ ತೆಗೆದು ಚಾಲಕ ಕುಂಜತ್ತೂರು ಬಾಚಳಿಕೆ ನಿವಾಸಿ ಮುಹಮ್ಮದ್ ಅಶ್ರಫ್ ಎಂ. (38) ಎಂಬಾತನ ವಿರುದ್ಧ ಕೇಸು ದಾಖಲಿಸಲಾಗಿದೆ. ಉಪ್ಪಳ ಗೇಟ್ ಬಳಿ ಪತ್ವಾಡಿ ಭಾಗದಿಂದ ಆಗಮಿಸಿದ ಓಮ್ನಿ ವ್ಯಾನನ್ನು ತಪಾಸಣೆ ನಡೆಸಿದಾಗ ಮರಳು ಪತ್ತೆಯಾಗಿದ್ದು, ಚಾಲಕ ಮಣಿಮುಂಡ ಬಿಸ್ಮಿಲ್ಲ ಮಂಜಿಲ್ನ ಸಲೀಂ ಖಾನ್ (28) ವಿರುದ್ಧ ಕೇಸು ದಾಖಲಿಸಿ ಓಮ್ನಿ ವಶಕ್ಕೆ ತೆಗೆದಿದ್ದಾರೆ. ಎಸ್ಐ ರತೀಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.