ತಲಪಾಡಿಯಿಂದ ತೂಮಿನಾಡು ವರೆಗಿನ ಸರ್ವೀಸ್ ರಸ್ತೆಯಲ್ಲಿ ತ್ಯಾಜ್ಯ ರಾಶಿ: ಸಾರ್ವಜನಿಕರಲ್ಲಿ ಆಕ್ರೋಶ
ಮಂಜೇಶ್ವರ: ಕಾಮಗಾರಿ ಪೂರ್ಣಗೊಂಡಿರುವ ಹೆದ್ದಾರಿಯ ತಲಪಾಡಿಯಿಂದ ತೂಮಿನಾಡು ತನಕದ ಸರ್ವೀಸ್ ರಸ್ತೆಯಲ್ಲಿ ಭಾರೀ ಪ್ರಮಾಣದಲ್ಲಿ ತ್ಯಾಜ್ಯ ರಾಶಿ ಕಂಡುಬರುತ್ತಿದ್ದು, ದುರ್ಗಂಧದಿಂದ ಜನರು ಮೂಗು ಮುಚ್ಚಿ ಸಂಚರಿ ಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕೈಕಂಬ, ಉಪ್ಪಳ ಗೇಟ್ ಪರಿಸರದಲ್ಲೂ ವ್ಯಾಪಕವಾಗಿ ತ್ಯಾಜ್ಯ ಕಂಡುಬರುತ್ತಿದ್ದು, ಈ ದಾರಿಯಾಗಿ ಶಾಲಾ ವಿದ್ಯಾರ್ಥಿಗಳು, ನೂರಾರು ವಾಹನಗಳು, ಕಾಲ್ನಡೆ ಮೂಲಕ ಜನರು ಸಂಚರಿಸುತ್ತಿದ್ದಾರೆ. ಪ್ಲಾಸ್ಟಿಕ್, ಆಹಾರ ಅವಶಿಷ್ಟಗಳು, ಉಪಯೋಗ ಶೂನ್ಯವಾದ ವಿವಿಧ ವಸ್ತುಗಳ ಸಹಿತ ತ್ಯಾಜ್ಯ ರಾಶಿಯಲ್ಲಿ ಕಂಡುಬರುತ್ತಿದೆ.
ಇದರಿಂದಾಗಿ ಸಾಂಕ್ರಾಮಿಕ ರೋಗ ಭೀತಿಯಿದ್ದು, ಸ್ಥಳೀಯ ನಿವಾಸಿಗಳು, ವ್ಯಾಪಾರಿಗಳು ರೋಷಗೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಉನ್ನತ ಗುಣಮಟ್ಟದಲ್ಲಿ ನಿರ್ಮಿಸಲಾಗಿದ್ದು, ಸರ್ವೀಸ್ ರಸ್ತೆಯಲ್ಲಿ ರಾಶಿ ಬಿದ್ದಿರುವ ತ್ಯಾಜ್ಯಗಳಿಂದ ಸ್ಥಳೀಯರಿಗೆ ಸಂಕಷ್ಟ ಎದುರಾಗಿದೆ. ತಕ್ಷಣ ಇದನ್ನು ಸ್ವಚ್ಛಗೊಳಿಸಲು ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕೆಂದು ಹಾಗೂ ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ಎಸೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.