ಶಾಲಾ ವಿದ್ಯಾರ್ಥಿ ನೀರಿನ ಸೆಳೆತಕ್ಕೆ ಸಿಲುಕಿ ಸಾವು

ಕಾಸರಗೋಡು: ಶಾಲಾ ವಿದ್ಯಾರ್ಥಿಯೋರ್ವ ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟ ಘಟನೆ ಚೆರ್ಕಳ ಬಳಿಯ ಪಾಡಿಯಲ್ಲಿ ಸಂಭವಿಸಿದೆ. ಮುಟ್ಟತ್ತೋಡಿ ವಿಲ್ಲೇಜ್‌ನ ಕಲ್ಲಕಟ್ಟ ಬೆಳ್ಳೂರಡ್ಕದ ಹಸೈನಾರ್‌ರ ಪುತ್ರ ಮಿಥ್‌ಲಾಜ್ (11) ಮೃತಪಟ್ಟ ದುರ್ದೈವಿ. ಈತ ಆಲಂಪಾಡಿ ಶಾಲೆಯ ೬ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. ಮೊನ್ನೆ ಸಂಜೆ ಸ್ನೇಹಿತರೊಂದಿಗೆ ತೋಡಿನಲ್ಲಿ ಸ್ನಾನಕ್ಕೆಂದು ತೆರಳಿದ್ದಾನೆನ್ನಲಾಗಿದೆ. ಈ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದನು. ಅಗ್ನಿಶಾಮದಳ, ವಿದ್ಯಾನಗರ ಪೊಲೀಸ್ ಹಾಗೂ ನಾಗರಿಕರು ಸೇರಿ ನಡೆಸಿದ ಶೋಧ ವೇಳೆ ಬಾಲಕನ ಮೃತದೇಹ ಪತ್ತೆಯಾಗಿದೆ. ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ಮೃತರು ತಂದೆ, ತಾಯಿ ಸಮೀರ, ಸಹೋದರ- ಸಹೋದರಿಯರಾದ ಸಾಬಿತ್, ಬಾಸಿತ್, ಬಾಸಿಲ, ಸಹಲ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾನೆ.

You cannot copy contents of this page