ಕಣ್ಣೂರು: ಪೊಲೀಸ್ ಗುಪ್ತಚರ ವಿಭಾಗದ ಅಧಿಕಾರಿಯ ಮನೆಗೆ ರಾತ್ರಿ ಮರೆಯಲ್ಲಿ ದುಷ್ಕರ್ಮಿಗಳು ಅತ್ಯುಘ್ರ ಸ್ಫೋಟ ಸಾಮರ್ಥ್ಯ ಹೊಂದಿದ್ದ ಸ್ಟೀಲ್ ಬಾಂಬ್ ಎಸೆದ ಘಟನೆ ನಿನ್ನೆ ರಾತ್ರಿ ಕೂತುಪರಂಬ ಬಳಿ ನಡೆದಿದೆ.
ಕಣ್ಣೂರು ಕಣ್ಣವಂ ಪೊಲೀಸ್ ಠಾಣೆ ಗುಪ್ತಚರ ವಿಭಾಗದ ಅಧಿಕಾರಿ ಯು.ಪಿ ಅರ್ಜುನ್ರ ಕೂತುಪರಂಬ ಸಮೀಪದ ಚೆರುವಾಂಚೇರಿಯಲ್ಲಿರುವ ಮನೆಗೆ ನಿನ್ನೆ ರಾತ್ರಿ ಸುಮಾರು ೧೨.೪೫ರ ವೇಳೆಗೆ ದುಷ್ಕರ್ಮಿಗಳು ಬಾಂಬೆಸೆದಿದ್ದಾರೆ. ಆದರೆ ಅದೃಷ್ಟವಶಾತ್ ಬಾಂಬ್ ಸಿಡಿಯಲಿಲ್ಲ. ಇದರಿಂದಾಗಿ ಸಂಭಾವ್ಯ ಭಾರೀ ದೊಡ್ಡ ದುರಂತ ತಪ್ಪಿಹೋಗಿದೆ. ಬಾಂಬೆಸೆಯುವ ವೇಳೆ ಆ ಮನೆಯಲ್ಲಿ ಅರ್ಜುನ್ ಮತ್ತು ಪತ್ನಿ ಇದ್ದರು. ಬೈಕ್ನಲ್ಲಿ ಬಂದ ದುಷ್ಕರ್ಮಿಗಳಿಬ್ಬರು ಈ ಮನೆಗೆ ಬಾಂಬ್ ಎಸೆದಿರುವುದಾಗಿಯೂ ಅವರ ಪತ್ತೆಗಾಗಿರುವ ಶೋಧ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ. ದುಷ್ಕರ್ಮಿಗಳು ಬೈಕ್ನಲ್ಲಿ ಬಂದು ಮನೆ ಬಳಿ ಬಾಂಬ್ ಇರಿಸಿರಬಹುದು ಅಥವಾ ಬಾಂಬ್ ಎಸೆದಿರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಬಾಂಬೆಸೆದ ಹಿನ್ನೆಲೆ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಚುನಾವಣೆ ವೇಳೆಯಲ್ಲೇ ಈ ಘಟನೆ ನಡೆದಿರುವುದನ್ನು ಪೊಲೀಸರು ಗಂಭೀರವಾಗಿ ಪರಿಗಣಿಸುತ್ತಿದ್ದಾರೆ.






