ಕಾಸರಗೋಡು: ಹಾಡಹಗಲೇ ಮನೆಗೆ ಅತಿಕ್ರಮಿಸಿ ನುಗ್ಗಿದ ದುಷ್ಕರ್ಮಿಯೋರ್ವ ವೃದ್ಧೆಯನ್ನು ಕೊಠಡಿಯೊಳಗೆ ಕೂಡಿ ಹಾಕಿ ಚಾಕು ತೋರಿಸಿ ಬೆದರಿಕೆಯೊಡ್ಡಿ ಹಣ ಹಾಗೂ ಚಿನ್ನಾಭರಣವನ್ನು ದರೋಡೆಗೈದ ಘಟನೆ ನಡೆದಿದೆ. ಚೀಮೇನಿ ಪೊಲೀಸ್ ಠಾಣೆ ವ್ಯಾಪ್ತಿಯ ಪಟ್ಟೋಳಿ ತೊಡುವಳಂ ಮಾಟ್ರಾಡನ್ ಹೌಸ್ನ ಎಂ. ನಾರಾಯಣಿ (73) ಎಂಬವರಿಗೆ ಬೆದರಿಕೆಯೊಡ್ಡಿ ಹಣ ಹಾಗೂ ಚಿನ್ನ ದೋಚಲಾಗಿದೆ. ನಿನ್ನೆ ಮಧ್ಯಾಹ್ನ 2.45ರ ವೇಳೆ ನಾಡನ್ನು ಬೆಚ್ಚಿಬೀಳಿಸಿದ ಈ ಘಟನೆ ನಡೆದಿದೆ.
ನಾರಾಯಣಿ ಮಗಳ ಮನೆಗೆ ಬಂದಿದ್ದರು. ಈ ವೇಳೆ ಮನೆಗೆ ಅತಿಕ್ರಮಿಸಿ ನುಗ್ಗಿದ ದುಷ್ಕರ್ಮಿ ನಾರಾಯಣಿಯನ್ನು ಕೊಠಡಿಯೊಳಗೆ ಕೂಡಿಹಾಕಿದ್ದಾನೆನ್ನಲಾಗಿದೆ. ಅನಂತರ ಕಪಾಟು ತೆರೆದು ಅದರಲ್ಲಿದ್ದ ೧೦ ಸಾವಿರ ರೂಪಾಯಿಗಳನ್ನು ದೋಚಿದ್ದಾನೆ. ಚಿನ್ನಾಭರಣಕ್ಕಾಗಿ ಹುಡುಕಾಟ ನಡೆಸಿದರೂ ಲಭಿಸಿರಲಿಲ್ಲ. ಇದರಿಂದ ನಾರಾಯಣಿಯ ಕುತ್ತಿಗೆಗೆ ಚಾಕು ಇರಿಸಿ ಬೆದರಿಕೆಯೊಡ್ಡದ ಬಳಿಕ ಅವರ ಬೆಂಡೋಲೆಯನ್ನು ತೆಗೆದಿರುವುದಾಗಿ ದೂರಲಾಗಿದೆ. ನಾರಾಯಣಿಯ ಮೊಬೈಲ್ ಫೋನ್ನ್ನು ದುಷ್ಕರ್ಮಿ ವಶಪಡಿಸಿ ಪರಾರಿಯಾಗಿದ್ದಾನೆಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಮಾಹಿತಿ ಲಭಿಸಿದ ಚೀಮೇನಿ ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದ್ದಾರೆ. ದುಷ್ಕರ್ಮಿಯನ್ನು ಕಂಡರೆ ಗುರುತುಹಚ್ಚಬಹುದೆಂದು ನಾರಾಯಣಿ ತಿಳಿಸಿದ್ದಾರೆ. ಮನೆಯಲ್ಲಿ ನಾರಾಯಣಿ ಮಾತ್ರವೇ ಇರುವ ಬಗ್ಗೆ ತಿಳಿದ ವ್ಯಕ್ತಿಯೇ ದರೋಡೆ ನಡೆಸಿರು ವುದಾಗಿ ಸಂಶಯಿಸಲಾಗುತ್ತಿದೆ ಯೆಂದು ಪೊಲೀಸರು ತಿಳಿಸಿದ್ದಾರೆ.
ಚೀಮೇನಿ ಪುಲಿಯನ್ನೂರಿನಲ್ಲಿ ನಿವೃತ್ತ ಅಧ್ಯಾಪಿಕೆ ಜಾನಕಿ ಎಂಬವರನ್ನು ಕುತ್ತಿಗೆ ಇರಿದು ಕೊಲೆಗೈದು, ಪತಿ ಕೃಷ್ಣನ್ರಿಗೆ ಗಂಭೀರ ಗಾಯಗೊಳಿಸಿದ ಘಟನೆ 2017 ಡಿಸೆಂಬರ್ 13ರಂದು ನಡೆದಿತ್ತು. ಅಂದು 13 ಪವನ್ ಚಿನ್ನಾಭರಣ ಹಾಗೂ 50 ಸಾವಿರ ರೂಪಾಯಿ ದೋಚಲು ಜಾನಕಿ ಟೀಚರ್ರನ್ನು ಪೂರ್ವವಿದ್ಯಾರ್ಥಿಗಳ ಒಂದು ತಂಡ ಪೈಶಾಚಿಕವಾಗಿ ಕೊಲೆಗೈದಿತ್ತು.
ನಾಡನ್ನು ಬೆಚ್ಚಿ ಬೀಳಿಸಿದ ಈ ಪ್ರಕರಣದಲ್ಲಿ ಅರುಣ್, ವಿಶಾಖ್ ಎಂಬಿವರಿಗೆ ಜಿಲ್ಲಾ ಸೆಶನ್ಸ್ ನ್ಯಾಯಾಲಯ ಅವಳಿ ಜೀವಾವಧಿ ಹಾಗೂ 17 ವರ್ಷ ಕಠಿಣ ಸಜೆ ವಿಧಿಸಿ ತೀರ್ಪು ನೀಡಿತ್ತು.






