ಮುಳ್ಳೇರಿಯ: ರಾಷ್ಟ್ರಪ್ರಶಸ್ತಿ ಪುರಸ್ಕೃತ ಅಧ್ಯಾಪಕರಾಗಿದ್ದ ಯಕ್ಷಗಾನ ಕಲಾವಿದ, ಗುರು ಕೆ. ಚಂದ ಪಾಟಾಳಿ ಪಡುಮಲೆ (80) ಇಂದು ಬೆಳಿಗ್ಗೆ ನಿಧನ ಹೊಂದಿದರು. ಸುಳ್ಯಪದವು ಬಳಿಯ ಪಡುಮಲೆಯಲ್ಲಿ ವಾಸವಾಗಿದ್ದರು. ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿ ದುಡಿದಿದ್ದರು. ಪಡುಮಲೆ ಚರಿತ್ರೆಯನ್ನು ಸಂಗ್ರಹಿಸಿ ಪ್ರಕಟಿಸಿದ್ದರು. ಹಲವಾರು ಪುಸ್ತಕಗಳನ್ನು ರಚಿಸಿದ ಇವರು ಓರ್ವ ಪ್ರಸಂಗಕರ್ತೃ ಕೂಡಾ ಆಗಿದ್ದರು. ಕೆ.ಸಿ. ಪಾಟಾಳಿ ಎಂದೇ ಪ್ರಸಿದ್ಧರಾಗಿದ್ದ ಇವರು ಬಣ್ಣದ ಮಹಾಲಿಂಗ ಯಕ್ಷ ಪ್ರತಿಷ್ಠಾನ ಪುತ್ತೂರು ಇದರ ಸ್ಥಾಪಕ ಸದಸ್ಯ ಹಾಗೂ ಗೌರವ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಕರ್ನಾಟಕದ ಶಾಲಾ ಯುವಜ ನೋತ್ಸವಗಳಲ್ಲಿ ತೀರ್ಪುಗಾರರಾಗಿ ಭಾಗವಹಿಸಿದ್ದರು. ಮೃತರು ಪತ್ನಿ ಕುಮುದಿನಿ, ಮಕ್ಕಳಾದ ಅರುಣ, ಅಮಿತ, ಅಳಿಯಂದಿರಾದ ಬಾಲಕೃಷ್ಣ, ಯತೀಶ, ಸೊಸೆ ಶರ್ಮಿಳ, ಸಹೋದರ-ಸಹೋದರಿಯರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಓರ್ವ ಪುತ್ರ ದೇವಿಪ್ರಸಾದ್ ಈ ಹಿಂದೆ ನಿಧನ ಹೊಂದಿದ್ದಾರೆ.







