ಸೌಹಾರ್ದತೆಗೆ ಸಾಕ್ಷಿ : ಉದ್ಯಾವರ ಜಮಾಯತ್‌ಗೆ ಭೇಟಿ ನೀಡಿದ ಶ್ರೀ ಅರಸು ದೈವ ಪಾತ್ರಿಗಳು

ಮಂಜೇಶ್ವರ: ತುಳುನಾಡಿನ ಸಾಂಸ್ಕೃತಿಕ ಪರಂಪರೆಯಲ್ಲಿ ಹಿಂದೂ-ಮುಸ್ಲಿA ಭಾವೈಕ್ಯತೆಗೆ ಸಾಕ್ಷಿಯಾಗಿರುವ ಇತಿಹಾಸ ಪ್ರಸಿದ್ಧ ಉದ್ಯಾವರ ಅರಸು ಮಂಜೀಷ್ಣಾರ್ ಕ್ಷೇತ್ರದ ವಾರ್ಷಿಕ ಜಾತ್ರೋತ್ಸವದ ಪೂರ್ವಭಾವಿ ವಿಧಿವಿಧಾನಗಳು ಭಕ್ತಿ ಮತ್ತು ಸೌಹಾರ್ದತೆಯೊಂದಿಗೆ ನೆರವೇರಿದವು. ಪ್ರಾಚೀನ ಕಾಲದಿಂ ದಲೂ ನಡೆದುಕೊಂಡು ಬರುತ್ತಿರುವ ಪದ್ಧತಿಯಂತೆ ಕ್ಷೇತ್ರದ ಅರಸು ದೈವಗಳ ಪಾತ್ರಿಗಳು ಶುಕ್ರವಾರ ಮಧ್ಯಾಹ್ನ ಉದ್ಯಾವರ ಸಾವಿರ ಜಮಾಯತ್ ಮಸೀದಿಗೆ ಭೇಟಿ ನೀಡಿ ಮುಸ್ಲಿಂ ಬಾಂಧವರನ್ನು ಜಾತ್ರೆಗೆ ಆಹ್ವಾನಿಸಿದರು. ಮೇಷ ಸಂಕ್ರಮಣ ಮುಗಿದು ಬರುವ ಮೊದಲ ಶುಕ್ರವಾರದಂದು ದೈವಗಳು ಮಸೀದಿಗೆ ಭೇಟಿ ನೀಡುವುದು ಶತಮಾನಗಳ ಹಳೆಯ ವಾಡಿಕೆ. ಕ್ಷೇತ್ರದ ಭಂಡಾರ ಮನೆಯಿಂದ ಹೊರಟ ದೈವ ಪಾತ್ರಿಗಳಿಗೆ ಮಸೀದಿಯ ಆಡಳಿತ ಸಮಿತಿ, ಶಾಸಕರು ಹಾಗೂ ಮುಸ್ಲಿಂ ಬಾಂಧವರು ಸ್ವಾಗತ ನೀಡಿದರು. ಆಮಂತ್ರಣ ನೀಡುವುದಷ್ಟೇ ಅಲ್ಲದೆ, ಜಾತ್ರೆಯ ನೇಮೋತ್ಸವದ ದಿನದಂದು ಮಸೀದಿಯ ಪದಾಧಿಕಾರಿಗಳಿಗೆ ದೈವಸ್ಥಾನದಲ್ಲಿ ವಿಶೇಷ ಗೌರವ ಮೀಸಲಿಡಲಾಗುತ್ತದೆ. ಜಾತ್ರೆಯ ಸಂದರ್ಭದಲ್ಲಿ ದೈವಗಳು ಆಶೀ ರ್ವದಿಸಿ ನೀಡುವ ಪ್ರಸಾದವನ್ನು (ಹೂವು) ಜಮಾಯತ್‌ನವರಿಗೆ ನೀಡುವ ಮೂಲಕ ಈ ಬಾಂಧವ್ಯ ವನ್ನು ಮತ್ತಷ್ಟು ಗಟ್ಟಿಗೊಳಿಸ ಲಾಗುತ್ತದೆ.
ಮೇ 9 ರಂದು ಧ್ವಜಾರೋಹಣ ದೊಂದಿಗೆ ಜಾತ್ರೆಗೆ ಅಧಿಕೃತ ಚಾಲನೆ ದೊರಕಲಿದ್ದು, 11 ಮತ್ತು 12 ವಾರ್ಷಿಕ ಬಂಡಿ ಉತ್ಸವದೊಂದಿಗೆ ಜಾತ್ರೋತ್ಸವ ನಡೆಯಲಿದೆ.
ಕಿರಣ್ ಶೆಟ್ಟಿ, ಸಂಜೀವ ಶೆಟ್ಟಿ, ಉಮೇಶ್ ಪೂಮಣ್ಣು, ತಿಮ್ಮ ಭಂಡಾರಿ, ಕುಂಞಣ್ಣ ಚೌಟ, ಮಂಜ ರೈ ಸೇರಿದಂತೆ ಕ್ಷೇತ್ರದ ಪದಾಧಿಕಾರಿಗಳು ಹಾಗೂ ಸಮುದಾಯದ ಪ್ರಮುಖರು ಭಾಗಿಯಾದರು.

You cannot copy contents of this page