ರಾಜ್ಯದಲ್ಲಿ ಹೋಟೆಲ್, ಬೇಕರಿ ಬಂದ್ ಪೂರ್ಣ

ತಿರುವನಂತಪುರ: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಏರಿಕೆಯನ್ನು  ಪ್ರತಿಭಟಿಸಿ ಹೋಟೆಲ್ ಆಂಡ್ ರೆಸ್ಟೋರೆಂಟ್ ಅಸೋಸಿ ಯೇಶನ್ ನೀಡಿರುವ ಆಹ್ವಾನದಂತೆ ರಾಜ್ಯದಲ್ಲಿ ಇಂದು ಹೋಟೆಲ್, ರೆಸ್ಟೋರೆಂಟ್‌ಗಳು, ಬೇಕರಿಗಳು ಮತ್ತು ಕ್ಯಾಂಟೀನ್‌ಗಳನ್ನು ಮುಚ್ಚುಗಡೆಗೊಳಿಸಿ ಮುಷ್ಕರ ನಡೆಸಲಾಗುತ್ತಿದೆ.  ಇಂದು ಬೆಳಿಗ್ಗೆ ಆರಂಭಗೊಂಡಿರುವ ಮುಷ್ಕರ ದಿಂದ ರಾಜ್ಯದ  ಹೋಟೆಲ್, ರೆಸ್ಟೋ ರಂಟ್ ಮತ್ತು ಬೇಕರಿ ವಲಯಗಳ ಎಲ್ಲಾ ವ್ಯವಹಾರಗಳು ಸ್ತಬ್ದಗೊಂಡಿದೆ. ಆನ್‌ಲೈನ್ ಮೂಲಕದ ಆಹಾರ ವಿತರಣೆಯೂ  ಮೊಟಕುಗೊಂಡಿದೆ.

ಇದರ ಪರಿಣಾಮ ಜನರು ಆಹಾರಕ್ಕಾಗಿ ತೀವ್ರ ಸಂಕಷ್ಟ ಎದುರಿಸಬೇಕಾಗಿ ಬಂದಿದೆ.  ಇಂದಿನ ಮುಷ್ಕರಕ್ಕೆ ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ,  ಆಲ್ ಕೇರಳ ಕೇಟರರ್ಸ್ ಅಸೋಸಿಯೇಶನ್ ಮತ್ತು ಹಾಸ್ಟೆಲ್ ಆನರ್ಸ್ ಅಸೋಸಿಯೇಶನ್ ಕೂಡಾ ಸಹಕಾರ ನೀಡುತ್ತಿವ.  19 ಕೆಜಿ  ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 993 ರೂ.ನಷ್ಟು  ಹೆಚ್ಚಿಸಿದ ಕ್ರಮವನ್ನು ಪ್ರತಿಭಟಿಸಿ ಇಂದು ಮುಷ್ಕರ ನಡೆಸಲಾಗುತ್ತಿದೆ. ಮುಷ್ಕರ ನಿರತ ಸಂಘಟನೆಗಳು ವಿವಿಧ ಕೇಂದ್ರ ಸರಕಾರಿ ಕಚೇರಿಗಳ ಮುಂದೆ ಪ್ರತಿಭಟನಾ ಮೆರವಣಿಗೆ ನಡೆಸಿದವು.

ವಾಣಿಜ್ಯ ಬಳಕೆ ಸಿಲಿಂಡರ್‌ಗಳ ಬೆಲೆಯೇರಿಕೆಯನ್ನು ಪ್ರತಿಭಟಿಸಿ ಮುಷ್ಕರ ನಡೆಸುತ್ತಿದ್ದರೂ ಇನ್ನೊಂದೆಡೆ ಹೆಚ್ಚಿನ ಎಲ್ಲಾ ಹೋಟೆಲ್‌ಗಳಲ್ಲೂ ಆಹಾರ ಸಾಮಗ್ರಿಗಳ ಬೆಲೆಯನ್ನು ಯಾವುದೇ ರೀತಿಯ ಪೂರ್ವ ಮಾಹಿತಿ ನೀಡದೆ ದಿಢೀರ್  ಹೆಚ್ಚಿಸಿರುವುದಾಗಿ ದೂರಲಾಗಿದೆ. ಇದರಿಂದಾಗಿ ಬೆಲೆಯೇರಿಕೆಯ ಎಲ್ಲಾ ಹೊರೆಯನ್ನು ಜನಸಾಮಾನ್ಯರೇ ಅನುಭವಿಸಬೇಕಾಗಿ ಬಂದಿದೆ.

You cannot copy contents of this page