ತಿರುವನಂತಪುರ: ಯುಡಿಎಫ್ ಸರಕಾರದ ಮಹತ್ತರ ಯೋಜನೆಗಳ ಲ್ಲೊಂದಾಗಿರುವ ಕೆಎಸ್ಆರ್ಟಿಸಿಯ ಆರ್ಡಿನರಿ ಬಸ್ಗಳಲ್ಲಿ ಪ್ರಿಯದರ್ಶಿನಿ ಎಂಬ ನಾಮಧೇಯದಲ್ಲಿ ಮಹಿಳೆಯ ರಿಗಾಗಿರುವ ಉಚಿತ ಪ್ರಯಾಣಕ್ಕೆ ಇಂದು ಬೆಳಿಗ್ಗೆ ಚಾಲನೆ ನೀಡಿದೆ.
ತಿರುವನಂತಪುರದ ತಂಬಾನೂರು ಟರ್ಮಿನಲ್ಲಿ ಇಂದು ಬೆಳಿಗ್ಗೆ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ವಿ.ಡಿ. ಸತೀಶನ್ ಇಬ್ಬರು ಮಹಿಳೆಯರಿಗೆ ಉಚಿತ ಪ್ರಯಾಣದ ಮೊದಲ ಜೀರೋ ಟಿಕೆಟ್ಗಳನ್ನು ನೀಡುವ ಮೂಲಕ ಈ ಯೋಜನೆಗೆ ವಿದ್ಯುಕ್ತ ಚಾಲನೆ ನೀಡಿದರು. ಸಾರಿಗೆ ಸಚಿವ ಸಿ.ಪಿ. ಜೋನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಂಬಾನ್ನೂರಿನಿಂದ ಮೊದಲು ಉಚಿತ ಸೇವೆ ಆರಂಭಿಸಿದ ಕೆಎಸ್ಆರ್ಟಿಸಿ ಬಸ್ನಲ್ಲಿ ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವರೂ ಪ್ರಯಾಣಿಸಿದರು. ವಿಶೇಷವೇನೆಂದರೆ ಪಿಎಸ್ಸಿ ಮೂಲಕ ಮೊದಲ ಬಾರಿ ನೇಮಕ ಲಭಿಸಿದ ಮಹಿಳಾ ಚಾಲಕಿಯಾಗಿರುವ ಪೆರುಂಬಾವೂರು ಡಿಪ್ಪೋದ ವಿ.ಸಿ. ಶೀಲಾ ಮೊದಲ ಬಾರಿಗೆ ಈ ಬಸ್ ಸೇವೆಯ ಸಾರಥ್ಯ ವಹಿಸಿದರು. ಜಯ ಕುಮಾರಿ ಈ ಬಸ್ನ ನಿರ್ವಾಹಕಿಯಾಗಿದ್ದಾರೆ. ಕೆಎಸ್ಆರ್ಟಿಸಿ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಕರ್ಯ ಏರ್ಪಡಿಸಿರುವುದು ಒಂದು ಔದಾರ್ಯವಲ್ಲ ಬದಲಾಗಿ ಅದೊಂದು ಗೌರವವಾಗಿದೆಯೆಂದು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಹೇಳಿದರು.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಈ ಯೋಜನೆಯ ಜಿಲ್ಲಾ ಮಟ್ಟದ ಉದ್ಘಾಟನೆಗಳು ಇಂದು ನಡೆಯಿತು.
ರಾಜ್ಯದಲ್ಲಿ ಕೆಎಸ್ಆರ್ಟಿಸಿ ಒಟ್ಟಾರೆಯಾಗಿ 3125 ಆರ್ಡಿನರಿ ಬಸ್ಗಳಿದ್ದು ಇದರಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಇಂದು ಬೆಳಿಗ್ಗಿನಿಂದ ಜ್ಯಾರಿಗೊಂಡಿದೆ. ಈ ಬಸ್ಗಳಲ್ಲಿ ಪ್ರಯಾಣಿಸುವ ಮಹಿಳೆಯರಿಗೂ ಝೀರೋ ರೂ. ಟಿಕೆಟ್ ನೀಡಲಾಗುತ್ತದೆ. ಕಾಸರಗೋಡು ಜಿಲ್ಲೆಯಲ್ಲಿ ಕಾಸರಗೋಡು ಡಿಪ್ಪೋದ 75 ಸೇರಿದಂತೆ ಒಟ್ಟು 135 ಆರ್ಡಿನರಿ ಕೆಎಸ್ಆರ್ಟಿಸಿ ಬಸ್ಗಳಿದ್ದು ಇವುಗಳಲ್ಲಿ ಮಹಿಳೆಯರಿಗೆ ಪ್ರಯಾಣ ಇಂದಿನಿಂದ ಪ್ರಯಾಣ ಉಚಿತವಾಗಿದೆ. ಹೀಗೆ ಉಚಿವಾಗಿ ಪ್ರಯಾಣಿಸುವ ಮಹಿಳೆಯರ ಜತೆ 5ರಿಂದ 11ರ ಮಧ್ಯೆ ಪ್ರಾಯದ ಗಂಡು ಮಕ್ಕಳಿದ್ದರೆ ಅವರಿಗೆ ಅರ್ಧ ಟಿಕೆಟ್ ಪಡೆಯಬೇಕು. ಹೀಗೆ ಉಚಿತ ಸೇವೆ ನಡೆಸುತ್ತಿರುವ ಎಲ್ಲಾ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಪ್ರಿಯದರ್ಶಿನಿ ಎಂಬ ಲೇಬಲ್ಗಳನ್ನು ಲಗತ್ತಿಸಲಾಗಿದೆ.







