ಉಪ್ಪಳ: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಶಿವಾಜಿ ನಗರ, ಶಾರದಾ ನಗರ ಮತ್ತು ಮೂಸೋಡಿ ಮುಂತಾದ ಸ್ಥಳಗಳಲ್ಲಿ ಸಮುದ್ರ ಕೊರೆತ ತೀವ್ರಗೊಂಡಿದೆ. ಜಿಲ್ಲಾಧಿಕಾರಿ ಈ ಸ್ಥಳಗಳಿಗೆ ತಕ್ಷಣ ಭೇಟಿ ನೀಡಿ ತುರ್ತು ನೆರವು ನೀಡಬೇಕು ಎಂದು ಒಬಿಸಿ ಮೋರ್ಚಾ ಕಾಸರಗೋಡು ಜಿಲ್ಲಾಧ್ಯಕ್ಷ ಕೆ.ಪಿ. ವಲ್ಸರಾಜ್ ಒತ್ತಾಯಿಸಿದರು. ಐಲ ಶಿವಾಜಿ ನಗರ ಕಡಲತೀರದಲ್ಲಿ ಮೀನುಗಾರರ ಬಲೆ ದುರಸ್ತಿ ಶೆಡ್ ಸಂಪೂರ್ಣವಾಗಿ ನಾಶವಾಗಿದ್ದು, ಕಡಲತೀರದಲ್ಲಿರುವ ಸಾರ್ವಜನಿಕ ಸ್ಮಶಾನವೂ ವಿನಾಶದ ಅಂಚಿನಲ್ಲಿದೆ. ಈ ಸ್ಥಳಗಳಲ್ಲಿನ ಮೀನುಗಾರರು ಭಯದಿಂದ ಬದುಕುತ್ತಿದ್ದಾರೆ. ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತ ಅವರ ಜೀವ ಮತ್ತು ಆಸ್ತಿಯನ್ನು ರಕ್ಷಿಸಲು ಸಿದ್ಧರಾಗಬೇಕು ಎಂದು ವಲ್ಸರಾಜ್ ಆಗ್ರಹಿಸಿದರು.






